ಪ್ರೇಯಸಿ ಸೇರಿ ಪೋಷಕರಿಗೆ ಬೆಂಕಿ ಹಚ್ಚಿದ ಕಿರಾತಕ ಬಂಧನ!

ಬೆಂಗಳೂರು: ಸಾಮಾಜಿಕ ಜಾಲತಾಣ ‘ಇನ್ಸ್ಟಾಗ್ರಾಂ’ ಮೂಲಕ ಶುರುವಾದ ಸ್ನೇಹವೊಂದು ದಾರುಣ ಅಂತ್ಯಕ್ಕೆ ತಿರುಗಿದೆ. ಬೈಕ್ ವಿಚಾರವಾಗಿ ನಡೆದ ಸಣ್ಣ ಜಗಳಕ್ಕೆ ಪ್ರೇಯಸಿ ಹಾಗೂ ಆಕೆಯ ಪೋಷಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನ ತರಬನಹಳ್ಳಿಯಲ್ಲಿ ಮಾರ್ಚ್ 6ರಂದು ನಡೆದಿದೆ.
ಬಂಧಿತ ಆರೋಪಿಯನ್ನು ಚಂದು ಅಲಿಯಾಸ್ ಪಾಂಡು ಎಂದು ಗುರುತಿಸಲಾಗಿದೆ. ಈತ ಸುಮಲತಾ ಎಂಬಾಕೆಯನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದನು. ವಿಶೇಷವೆಂದರೆ, ಇಬ್ಬರಿಗೂ ಈ ಮೊದಲೇ ಮದುವೆಯಾಗಿ ಮಕ್ಕಳಿದ್ದರೂ ಪರಸ್ಪರ ಸಂಬಂಧ ಹೊಂದಿದ್ದರು. ಇತ್ತೀಚೆಗೆ ಚಂದು ಮತ್ತೊಬ್ಬ ಮಹಿಳೆಯನ್ನು ಮನೆಗೆ ಕರೆತಂದಿದ್ದಕ್ಕೆ ಸುಮಲತಾ ಆತನಿಂದ ದೂರವಾಗಿದ್ದರು.

ಶುಕ್ರವಾರ ಸಂಜೆ ಬೈಕ್ ನೀಡುವ ವಿಚಾರವಾಗಿ ಚಂದು ಮತ್ತು ಸುಮಲತಾ ಕುಟುಂಬದ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಸುಮಲತಾ ಅವರ ತಾಯಿ ಮಂಜಮ್ಮ ಮತ್ತು ತಂದೆ ಶ್ರೀರಾಮುಲು ಬೈಕ್ ನೀಡಲು ನಿರಾಕರಿಸಿದ್ದಾರೆ. ಇದರಿಂದ ಕೆರಳಿದ ಚಂದು, ತಾನು ತಂದಿದ್ದ ಪೆಟ್ರೋಲ್ ಅನ್ನು ಮೂವರ ಮೇಲೂ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ಪ್ರಸ್ತುತ ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುಮಲತಾ ಅವರ ತಾಯಿ ಮಂಜಮ್ಮ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಚಂದುವನ್ನು ಬಂಧಿಸಿದ್ದಾರೆ. ಈ ಹಿಂದೆ ಕೂಡ ಈತನ ವಿರುದ್ಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.




