
ಕರ್ನಾಟಕ ಬಿಜೆಪಿಯಲ್ಲಿ ಈಗ ‘ಬ್ಯಾನರ್ ರಾಜಕೀಯ’ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಪಕ್ಷದ ಕಾರ್ಯಕ್ರಮದ ಬ್ಯಾನರ್ನಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಫೋಟೋ ಕೈಬಿಟ್ಟ ವಿಚಾರ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಪ್ರತಿಕ್ರಿಯೆ ನೀಡಿದ್ದು, ನಡೆದ ಪ್ರಮಾದಕ್ಕೆ ತಾವೇ ಹೊಣೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಫೋಟೋ ಇಲ್ಲದ ವಿಚಾರವನ್ನು ಸ್ವತಃ ವಿಜಯೇಂದ್ರ ಅವರೇ ಬೆಲ್ಲದ್ ಅವರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಈ ಬಗ್ಗೆ ಸಮಜಾಯಿಷಿ ನೀಡಿರುವ ಬೆಲ್ಲದ್, “ವಿದ್ಯಾರ್ಥಿಗಳ ಪ್ರತಿಭಟನೆಗೆ ಅನುಮತಿ ಸಿಗುವುದು ತಡವಾಯಿತು. ಕೊನೆ ಕ್ಷಣದಲ್ಲಿ ವಿದ್ಯಾರ್ಥಿಗಳೇ ಬ್ಯಾನರ್ ಸಿದ್ಧಪಡಿಸಿದ್ದರಿಂದ ಈ ತಪ್ಪು ನಡೆದಿದೆ. ಇದೊಂದು ಸಣ್ಣ ವಿಚಾರವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸುತ್ತೇನೆ” ಎಂದು ಹೇಳಿದ್ದಾರೆ.
ಪಕ್ಷದ ಆಂತರಿಕ ವಲಯದಲ್ಲಿ ಈ ಫೋಟೋ ವಿವಾದ ಅಸಮಾಧಾನಕ್ಕೆ ಕಾರಣವಾಗಿರುವ ಬೆನ್ನಲ್ಲೇ ಬೆಲ್ಲದ್ ಅವರು ಬಹಿರಂಗವಾಗಿ ಮಿಸ್ಟೇಕ್ ಒಪ್ಪಿಕೊಂಡಿರುವುದು ಕುತೂಹಲ ಮೂಡಿಸಿದೆ. “ಇದೊಂದು ಮಿಸ್ಟೇಕ್ ಅಷ್ಟೇ, ಮುಂದೆ ಎಲ್ಲವೂ ಸರಿಯಾಗಲಿದೆ” ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.




