ದೇಶ/ವಿದೇಶಸುದ್ದಿ

ಮಧ್ಯಪ್ರಾಚ್ಯ ಯುದ್ಧದ ಕಿಚ್ಚಿಗೆ ಇಬ್ಬರು ಭಾರತೀಯರು ಬಲಿ..!

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಸಂಘರ್ಷ ಈಗ ಆರನೇ ದಿನಕ್ಕೆ ಕಾಲಿರಿಸಿದ್ದು, ಪರಿಸ್ಥಿತಿ ತೀರಾ ವಿಕೋಪಕ್ಕೆ ಹೋಗಿದೆ. ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಇಂದು ಭೀಕರ ಸ್ಫೋಟ ಸಂಭವಿಸಿದ್ದು, ಇಡೀ ನಗರ ದಾಳಿಯ ಭೀತಿಯಲ್ಲಿ ನಲುಗುತ್ತಿದೆ. ಇಸ್ರೇಲ್ ಮತ್ತು ಅಮೆರಿಕದ ಜಂಟಿ ಪಡೆಗಳು ಇರಾನ್ ಮೇಲಿನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಇತ್ತ ಇರಾನ್ ಕೂಡ ತಿರುಗೇಟು ನೀಡಲು ಅಣಿಯಾಗುತ್ತಿದೆ.

ಈ ಯುದ್ಧದ ಕರಾಳತೆ ಈಗ ಭಾರತೀಯರಿಗೂ ತಟ್ಟಿದೆ. ಇರಾನ್ ನಡೆಸಿದ ಮಿಸೈಲ್ ದಾಳಿಗೆ ಇಬ್ಬರು ಭಾರತೀಯರು ಬಲಿಯಾಗಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಬಿಹಾರ ಮೂಲದ ಅಶೀಶ್ ಮತ್ತು ರಾಜಸ್ಥಾನದ ದಿಲೀಪ್ ಎಂಬುವವರೇ ಮೃತಪಟ್ಟ ದುರ್ದೈವಿಗಳು. ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದ್ದ ಈ ಇಬ್ಬರು ಭಾರತೀಯರು ಯುದ್ಧದ ಕಿಚ್ಚಿಗೆ ಬಲಿಯಾಗಿರುವುದು ದೇಶಾದ್ಯಂತ ಶೋಕ ಮೂಡಿಸಿದೆ.

ಸಂಘರ್ಷದ ವ್ಯಾಪ್ತಿ ಈಗ ಸಮುದ್ರಕ್ಕೂ ಹಬ್ಬಿದ್ದು, ಇರಾನ್ ತನ್ನ ಮತ್ತೊಂದು ನೌಕೆಯನ್ನು ಶ್ರೀಲಂಕಾ ಕರಾವಳಿಗೆ ಕಳುಹಿಸಿಕೊಟ್ಟಿದೆ. ಇತ್ತ ಹಾರ್ಮೋಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್ ಮೇಲೆ ಭೀಕರ ದಾಳಿ ನಡೆದಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿದೆ. ಅಲ್ಲದೆ, ಇರಾನ್ ಪಡೆಗಳು ಇರಾಕ್‌ನಲ್ಲಿರುವ ಕುರ್ದಿಶ್ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂದು ವರದಿಯಾಗಿದೆ.

ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಮತ್ತು ಇಸ್ರೇಲ್ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ. ಯುದ್ಧದಿಂದ ಯಾರಿಗೂ ಲಾಭವಿಲ್ಲ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಆಗ್ರಹಿಸಿದ್ದಾರೆ. ಭಾರತೀಯರ ಸಾವಿನ ಬೆನ್ನಲ್ಲೇ ಈ ಮನವಿ ಮಹತ್ವ ಪಡೆದುಕೊಂಡಿದ್ದು, ಜಾಗತಿಕ ನಾಯಕರು ಶಾಂತಿ ಸ್ಥಾಪನೆಗೆ ಮುಂದಾಗಬೇಕಿದೆ.

Comments (0)

Your email address will not be published. Required fields are marked *

Back to top button