ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ‘ರಣರಂಗ ಬಿಟ್ಟು ಓಡುವ ಹೇಡಿ ನಾನಲ್ಲ’ ಎಂದು ಗುಡುಗುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಸಾಮಾಜಿಕ ನ್ಯಾಯ ದಿನದ ಅಂಗವಾಗಿ ಸುದೀರ್ಘ ಅಂಕಣವೊಂದನ್ನು ಹಂಚಿಕೊಂಡಿರುವ ಅವರು, ತಮ್ಮ ವಿರೋಧಿಗಳ ವಿರುದ್ಧ ನೇರ ಸಮರ ಸಾರಿದ್ದಾರೆ. ಈ ಸಂದೇಶವು ಕೇವಲ ವಿರೋಧ ಪಕ್ಷಗಳಿಗಷ್ಟೇ ಅಲ್ಲದೆ, ಸ್ವಪಕ್ಷದಲ್ಲಿನ ವಿರೋಧಿಗಳಿಗೂ ನೀಡಿದ ಎಚ್ಚರಿಕೆ ಎಂಬಂತೆ ಬಿಂಬಿತವಾಗುತ್ತಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.ತಮ್ಮ ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಪಯಣವನ್ನು ಸ್ಮರಿಸಿರುವ ಮುಖ್ಯಮಂತ್ರಿಗಳು, ಈ ಹಾದಿ ಎಂದಿಗೂ ಹೂವಿನ ಹಾಸಿಗೆಯಾಗಿರಲಿಲ್ಲ , ಕಲ್ಲು-ಮುಳ್ಳುಗಳಿಂದ ಕೂಡಿದ ಈ ಹಾದಿಯಲ್ಲಿ ತಮ್ಮನ್ನು ರಾಜಕೀಯವಾಗಿ ಹತ್ತಿಕ್ಕಲು ಅನೇಕ ದೊಡ್ಡ ನಾಯಕರು ಕುಟಿಲ ಕಾರಸ್ತಾನಗಳನ್ನು ನಡೆಸಿದ್ದಾರೆ, ಆದರೆ ಜನರ ಆಶೀರ್ವಾದದ ಬಲದಿಂದ ತಾವು ಅದೆಲ್ಲವನ್ನೂ ಮೆಟ್ಟಿ ನಿಂತು ಇಲ್ಲಿಯವರೆಗೆ ಬಂದಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ವಿರೋಧಿಗಳ ಯಾವುದೇ ತಂತ್ರಕ್ಕೂ ತಾವು ಬಗ್ಗುವುದಿಲ್ಲ ,ತಮ್ಮ ಉಸಿರಿರುವವರೆಗೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವುದಾಗಿ ಪಣತೊಟ್ಟಿರುವೆ , ರಣರಂಗ ಬಿಟ್ಟು ಓಡುವ ಹೇಡಿ ನಾನಲ್ಲ ಎಂದು ಸವಾಲು ಎಸೆದಿದ್ದಾರೆ. ಜನರ ಬೆಂಬಲ ಇರುವವರೆಗೆ ತಮ್ಮ ಈ ಹೋರಾಟ ಮುಂದುವರಿಯಲಿದೆ ಎಂಬ ಮಾತುಗಳು ರಾಜ್ಯ ರಾಜಕಾರಣದಲ್ಲಿ ಹೊಸ ಸಂಘರ್ಷಕ್ಕೆ ನಾಂದಿ ಹಾಡುವ ಮುನ್ಸೂಚನೆ ನೀಡಿವೆ.


