ಉತ್ತರ ಕನ್ನಡ: ಸಿದ್ದಾಪುರದ ವಸಂತ ನಾಯ್ಕ ಹತ್ಯೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ಆರೋಪಿ ಸುಚಿತ್ರಾ ಈ ಕೃತ್ಯದ ಹಿಂದೆ ಹನಿಟ್ರ್ಯಾಪ್ ಮತ್ತು ಬ್ಲ್ಯಾಕ್ಮೇಲ್ ತಂತ್ರ ಹೂಡಿದ್ದಳು ಎಂಬ ಸ್ಫೋಟಕ ಸತ್ಯ ಬಯಲಾಗಿದೆ. ಸುಚಿತ್ರಾಳ ಪತಿ ಮಹೇಶ್ ನಾಯ್ಕ ಅವರೇ ಈ ಕುರಿತು ಗಂಭೀರ ಆರೋಪ ಮಾಡಿದ್ದು, ಜ್ಯೋತಿಷಿ ಕಮಲಾಕರ ಭಟ್ ಅವರ ಖಾಸಗಿ ಕ್ಷಣಗಳ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡು ಸುಚಿತ್ರಾ ಅವರನ್ನು ಬೆದರಿಸುತ್ತಿದ್ದಳು ಎಂದು ಮಾಹಿತಿ ನೀಡಿದ್ದಾರೆ.
ಮಹೇಶ್ ನಾಯ್ಕ ಅವರ ಪ್ರಕಾರ, ಕಮಲಾಕರ ಭಟ್ ಅವರ ಸಂಪರ್ಕಕ್ಕೆ ಬಂದ ಸುಚಿತ್ರಾ, ಯೋಜಿತವಾಗಿ ಅವರೊಂದಿಗೆ ಆಪ್ತವಾಗಿ ವರ್ತಿಸಿ ವಿಡಿಯೋಗಳನ್ನು ಮಾಡಿಕೊಂಡಿದ್ದಳು. “ನನ್ನನ್ನು ಮತ್ತು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ನಿನ್ನ ಮರ್ಯಾದೆ ಹರಾಜು ಹಾಕುತ್ತೇನೆ” ಎಂದು ಕಮಲಾಕರ್ ಅವರಿಗೆ ಬೆದರಿಕೆ ಹಾಕುತ್ತಿದ್ದಳು. ಸಮಾಜದಲ್ಲಿ ಗೌರವ ಹೊಂದಿದ್ದ ಕಮಲಾಕರ್ ಭಟ್, ತಮ್ಮ ಮರ್ಯಾದೆಗೆ ಅಂಜಿ ಸುಚಿತ್ರಾ ಹೇಳಿದಂತೆ ಕೇಳುತ್ತಿದ್ದರು ಮತ್ತು ಆಕೆಯನ್ನು ಅನಿವಾರ್ಯವಾಗಿ ತನ್ನೊಂದಿಗೆ ಇರಿಸಿಕೊಂಡಿದ್ದರು ಎಂಬುದು ಬಹಿರಂಗವಾಗಿದೆ.
ಮಹೇಶ್ ನಾಯ್ಕ ಅವರ ಪುತ್ರಿಗೆ ಈ ಬ್ಲ್ಯಾಕ್ಮೇಲ್ ವಿಚಾರ ಮೊದಲೇ ತಿಳಿದಿತ್ತಾದರೂ, ತಾಯಿಯ ಮೇಲಿನ ಹೆದರಿಕೆಯಿಂದ ಆಕೆ ಯಾರಿಗೂ ತಿಳಿಸಿರಲಿಲ್ಲ. ಈಗ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡ ನಂತರ ಮಗಳು ಈ ಎಲ್ಲಾ ವಿಷಯಗಳನ್ನು ತಂದೆಯ ಬಳಿ ಹಂಚಿಕೊಂಡಿದ್ದಾಳೆ. ಈ ಹೇಳಿಕೆಯು ಸುಚಿತ್ರಾಳ ಕ್ರಿಮಿನಲ್ ಹಿನ್ನೆಲೆ ಮತ್ತು ಹತ್ಯೆ ಪ್ರಕರಣದಲ್ಲಿ ಆಕೆಯ ಸಕ್ರಿಯ ಪಾತ್ರದ ಮೇಲೆ ಬೆಳಕು ಚೆಲ್ಲುತ್ತಿದೆ.


