ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜ್ಯಾತಿಥ್ಯ ನೀಡಲಾಗುತ್ತಿದ್ದ ವಿಡಿಯೋ ವೈರಲ್ ಆದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ..
ಜೈಲಿನ ವಿಡಿಯೋವನ್ನು ದರ್ಶನ್ ಆಪ್ತ, ನಟ ಧನ್ವೀರ್ ಲೀಕ್ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ.. ಈ ಪ್ರಕರಣದ ವಿಚಾರಣೆ ಮಾಡುವಾಗ ನಟ ಧನ್ವೀರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಹೆಸರನ್ನು ಬಾಯ್ಬಿಟ್ಟಿದ್ದಾರೆ. ಇದರಿಂದ ವಿಜಯಲಕ್ಷ್ಮೀ ಅವರನ್ನೂ ತನಿಖಾಧಿಕಾರಿಗಳು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.
ಈ ಮೊದಲು ಧನ್ವೀರ್ ಅವರು ವಿಚಾರಣೆ ಎದುರಿಸಿದ್ದರು. ಈ ವೇಳೆ ಅವರು ಯಾವುದೇ ವಿಷಯ ಬಾಯ್ಬಿಟ್ಟಿರಲಿಲ್ಲ. ಬಳಿಕ ಮತ್ತೆ ಅವರಿಗೆ ಎರಡನೇ ನೋಟಿಸ್ ನೀಡಲಾಯಿತು. ಎರಡನೇ ಬಾರಿಗೆ ಧನ್ವೀರ್ ಅವರು ಪೊಲೀಸರ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಈ ವೇಳೆ ಹಲವು ವಿಷಯಗಳನ್ನು ರಿವೀಲ್ ಮಾಡಿದ್ದಾರೆ ಎನ್ನಲಾಗಿದೆ. ವಿಡಿಯೋ ಕಳುಹಿಸಿದ್ದು ಯಾರು ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ.
ನಾನು ಆ ವಿಡಿಯೋವನ್ನು ವೈರಲ್ ಮಾಡಿಲ್ಲ. ಅದು ಹೇಗೆ ವೈರಲ್ ಆಯ್ತು ಅಂತ ನನಗೆ ಗೊತ್ತಿಲ್ಲ. ಆದ್ರೆ ಒಬ್ಬ ವಕೀಲರಿಂದ ಆ ವಿಡಿಯೋ ನನ್ನ ಬಳಿ ಬಂದಿತ್ತು. ನಾನು ಅದನ್ನು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೆ ಮಾತ್ರ ಫಾರ್ವರ್ಡ್ ಮಾಡಿದ್ದೆ ಎಂದು ಧನ್ವೀರ್ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ..
ವಿಜಯಲಕ್ಷ್ಮೀ ಹೆಸರು ಹೇಳುತ್ತಿದ್ದಂತೆ ಈ ವಿಷಯವನ್ನು ತನಿಖಾಧಿಕಾರಿಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವಿಜಯಲಕ್ಷೀ ಅವರನ್ನು ವಿಚಾರಣೆಗೆ ಕರೆಸೋ ಬಗ್ಗೆ ಚರ್ಚೆ ನಡೆದಿದೆ. ಒಂದೊಮ್ಮೆ ಧನ್ವೀರ್ ಅವರು ವಿಚಾರಣೆಗೆ ಸರಿಯಾಗಿ ಸ್ಪಂದಿಸದೇ ಇದ್ದರೆ ವಿಜಯಲಕ್ಷ್ಮೀ ಅವರನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರಿಂದ ಅವರಿಗೆ ಸಂಕಷ್ಟ ಹೆಚ್ಚುವ ಸಾಧ್ಯತೆ ಇದೆ.
ಇನ್ನು ವಿಡಿಯೋ ಯಾವ ಅಕೌಂಟ್ನಿಂದ ಅಪ್ಲೋಡ್ ಆಗಿದೆ, ಯಾರು ಮೊದಲು ಪೋಸ್ಟ್ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಮೆಟಾ ಕಂಪನಿಗೆ ಈಗಾಗಲೇ ಇಮೇಲ್ ಕಳುಹಿಸಿ ಮಾಹಿತಿ ಕೋರಿದ್ದಾರೆ. ಇದಲ್ಲದೆ ಜೈಲಿನಲ್ಲಿದ್ದ ಕೈದಿಗಳನ್ನೂ ವಿಚಾರಣೆ ಮಾಡಲಾಗುತ್ತಿದೆ. ಜೈಲಿನ ರಾಜಾತಿಥ್ಯ ವಿಡಿಯೋ ಲೀಕ್ ಪ್ರಕರಣ ಇದೀಗ ದರ್ಶನ್ ಕುಟುಂಬದತ್ತ ತಿರುಗಿದ್ದು, ಧನ್ವೀರ್ ಹೇಳಿಕೆಯಿಂದ ವಿಜಯಲಕ್ಷ್ಮೀ ಅವರು ತನಿಖೆ ಎದುರಿಸುವ ಸಾಧ್ಯತೆ ಇದೆ.


