ಗಂಡನನ್ನ ಬಿಟ್ಟು ನನ್ನೊಂದಿಗೆ ಬಾ ಅಂದ ; ಬಾರದಿದ್ದಕ್ಕೆ ಮಹಿಳೆಯನ್ನ ಕೊಂದು ತಾನು ಆತ್ಮಹತ್ಯೆಗೆ ಶರಣು…!

ಬೆಂಗಳೂರು: ಮದುವೆಗೆ ನಿರಾಕರಿಸಿದ ವಿವಾಹಿತೆ ಮಹಿಳೆಯನ್ನ ಚಾಕುವಿನಿಂದ ಹತ್ಯೆ ಮಾಡಿ ಬಂಧನ ಭೀತಿಯಿಂದ ತಾನು ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವೈಟ್ ಫೀಲ್ಡ್ ಠಾಣಾ ವ್ಯಾಪಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮೋವುಹಾ ಮಂಡಲ್ (26) ಹತ್ಯೆಯಾದ ವಿವಾಹಿತೆ. ಕೃತ್ಯವೆಸಗಿದ ಬಂಧನ ಭೀತಿಯಿಂದ ಬಳಿಕ ಮರವೊಂದಕ್ಕೆ ನೇಣುಬಿಗಿದುಕೊಂಡು ಮಿಥುನ್ ಮಂಡಲ್ (40) ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಹತ್ಯೆ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಮಿಥುನ್ ಮಂಡಲ್ ಕಳೆದ ಏಳೆಂಟು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಹೌಸ್ ಕೀಪಿಂಗ್ ಹಾಗೂ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ ವೈಟ್ ಫೀಲ್ಡ್ ನ ಪ್ರಶಾಂತ್ ಲೇಔಟ್ ನ ಪಿಜಿಯೊಂದರಲ್ಲಿ ನೆಲೆಸಿದ್ದ. ಕೆಲ ತಿಂಗಳ ಹಿಂದೆ ಮೋವುಹಾ ಮಂಡಲ್ ನ ಪರಿಚಯವಾಗಿದೆ. ಈಕೆಯು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದು, ಐಟಿಪಿಎಲ್ ಬಳಿಯ ಸಾವಿತ್ರಮ್ಮ ಶೆಡ್ ವೊಂದರಲ್ಲಿ ವಾಸವಾಗಿದ್ದಳು. ಈಕೆಗೆ ಮೂರು ವರ್ಷದ ಹೆಣ್ಣು ಮಗುವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರು ತಿಂಗಳ ಹಿಂದೆ ಪರಿಚಿತರಾಗಿದ್ದ ಮೋವುಹಾ ಮಂಡಲ್ ಗೆ ತನ್ನನ್ನ ಪ್ರೀತಿಸುವಂತೆ ನಿವೇಧಿಸಿಕೊಂಡಿದ್ದ. ತನಗೆ ಮದುವೆಯಾಗಿದೆ ಎಂದು ಹೇಳಿದರೂ ಗಂಡನನ್ನ ತೊರೆದು ತನ್ನ ಜೊತೆಯಿರುವಂತೆ ಮಿಥುಲ್ ಒತ್ತಡ ಹೇರಿದ್ದ. ಈತನ ಒತ್ತಡಕ್ಕೆ ಮಣಿಯದೆ ಆತನೊಂದಿಗೆ ಗಲಾಟೆ ಮಾಡಿಕೊಂಡಿದ್ದಳು. ಇದರಿಂದ ತಲೆಕೆಡಿಸಿಕೊಂಡು ಕೆಲಸಕ್ಕೆ ಹೋಗುತ್ತಿರಲಿಲ್ಲ. ಖರ್ಚಿಗಾಗಿ ಸ್ನೇಹಿತರಿಂದ ಕೈಸಾಲ ಪಡೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಪ್ರೀತಿಸಿದ್ದ ವಿವಾಹಿತೆಯನ್ನ ಒಲಿಸಿಕೊಳ್ಳಲು ವಿಫಲವಾದ ಪರಿಣಾಮ ಆಕೆ ಮೇಲೆ ಮಿಥುನ್ ಹಗೆತನ ಮಿಥುನ್ ಸಾಧಿಸಿದ್ದ. ಆಕೆಯನ್ನ ಸಾಯಿಸುವ ಸಂಚು ರೂಪಿಸಿದ ಮಿಥುನ್ ಬುಧವಾರ ರಾತ್ರಿ ಆಕೆ ಮನೆಯಲ್ಲಿ ಯಾರು ಇಲ್ಲದಿರುವಾಗ ಹೋಗಿ ಚಾಕುವಿನಿಂದ ಕುತ್ತಿಗೆ ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ರಾತ್ರಿಯಿಡಿ ಶೋಧ ನಡೆಸಿದ್ದರು. ಇಂದು ಬೆಳಗ್ಗೆ ನಲ್ಲೂರಹಳ್ಳಿ ಕೆರೆಯ ಮರವೊಂದಕ್ಕೆ ಮಿಥುನ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.




