ಬೆಂಗಳೂರು: ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿರುವ ಖತರ್ನಾಕ್ ಕಳ್ಳ ಜೋಡಿ, ಎಟಿಎಂ ಕಾರ್ಡ್ ಬಳಸಲು ಬಾರದ ಅಮಾಯಕ ಜನರೇ ಇವರ ಟಾರ್ಗೆಟ್ ಆಗಿದೆ. ಎಟಿಎಂ ಸೆಂಟರ್ ಬಳಿ ಹೊಂಚು ಹಾಕಿ ಕಾದು ಕುಳಿತಿರುತ್ತಿದ್ದ ಖಧೀಮರು,
ಸಾರ್ವಜನಿಕರಿಗೆ ಸಹಾಯ ಮಾಡುವ ನೆಪದಲ್ಲಿ ಬಂದು ಉಂಡೆ ನಾಮ ಹಾಕಿ ಎಸ್ಕೇಪ್ ಆಗುತ್ತಿದ್ದರು. ಬೇರೆಯವರ ಕಾರ್ಡ್ ಎಗರಿಸಿಕೊಂಡು ಎಟಿಎಂಗಳಲ್ಲಿ ದೋಚುತ್ತಿದ್ದ ಆಸಾಮಿಗಳನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಂಧಿಸಿದ್ದಾರೆ.
ಇನ್ನು ಬಿಹಾರ ಮೂಲದ ಆರೋಪಿಗಳಾದ ವಿವೇಕ್ ಕುಮಾರ್ , ಚುನಿ ಲಾಲ್ ಕುಮಾರ್ ನನ್ನು ಬಂಧಿಸಿ, ಆರೋಪಿಗಳಿಂದ ಸುಮಾರು 37ಕ್ಕೂ ಅಧಿಕ ಬೇರೆ ಬೇರೆ ಬ್ಯಾಂಕ್ ಗಳ ಎಟಿಎಂ ಕಾರ್ಡ್ಗಳ ಜೊತೆಗೆ 75 ಸಾವಿರನಗದು ಜಪ್ತಿ ಮಾಡಿಕೊಂಡಿದ್ದಾರೆ.
ಕ್ಷಣಮಾತ್ರದಲ್ಲಿ ಎಟಿಎಂ ಕಾರ್ಡ್ ಎಕ್ಸ್ ಚೇಂಜ್
ಸಾಮಾನ್ಯ ಜನರು ಎಟಿಎಂನಲ್ಲಿ ಹಣ ಡ್ರಾ ಮಾಡಲು ಅಥವಾ ಎಟಿಎಂ ಕಾರ್ಡ್ ಪಿನ್ ಚೇಂಜ್ ಮಾಡಲು ಬಾರದವರು ಬರುವುದನ್ನೇ ಆರೋಪಿಗಳು ಕಾಯುತ್ತಿದ್ದರು. ಅಂತಹ ಜನರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂಗೆ ಎಂಟ್ರಿ ಕೊಡುತ್ತಿದ್ದರು. ಬಳಿಕ ಕಾರ್ಡ್ ದಾರದಿಂದ ಅವರು ಬಳಸುವ ಎಟಿಎಂ ಕಾರ್ಡ್ ಪಿನ್ ತಿಳಿದುಕೊಳ್ಳುತ್ತಿದ್ದರು. ಇದೇ ವೇಳೆ ಈಗಾಗಲೇ ಸಾರ್ವಜನಿಕರಿಂದ ಅಥವಾ ಎಟಿಎಂಗೆ ಬಂದಿದ್ದವರು ಕೊಟ್ಟ ಕಾರ್ಡ್ ಬದಲಿಗೆ ಆರೋಪಿಗಳು ತಮ್ಮ ಬಳಿಯಿರುವ ಕಾರ್ಡ್ ಅವರ ಕೈಗೆ ಕೊಟ್ಟು ಕಳುಹಿಸುತ್ತಿದ್ದರು. ಹೀಗೆಯೇ ಉತ್ತರಹಳ್ಳಿಯ ಕೆನರಾ ಬ್ಯಾಂಕ್ಗೆ ಒಂದೂವರೆ ಲಕ್ಷ ಹಣ ಡೆಪಾಸಿಟ್ ಮಾಡಿದ್ದ ಸಂಜಯ್ ಕುಮಾರ್, ಎಟಿಎಂ ಪಿನ್ ಚೇಂಜ್ ಮಾಡಲು ಪಕ್ಕದಲ್ಲೇ ಇದ್ದ ಎಟಿಎಂಗೆ ತೆರಳಿದ್ದಾನೆ.
ಈ ವೇಳೆ ಪಿನ್ ಚೇಂಜ್ ಮಾಡಲು ಬರದಿದ್ದಾಗ ಅಲ್ಲೇ ಇದ್ದ ಇಬ್ಬರು ವ್ಯಕ್ತಿಗಳ ಸಹಾಯ ಕೇಳಿದ್ದರು. ಇದೇ ಕ್ಷಣಕ್ಕೆ ಜಾತಕಪಕ್ಷಿಗಳಂತೆ ಕಾಯುತ್ತಿದ್ದ ಐನಾತಿ ಆಸಾಮಿಗಳ ಕೈಯಿಗೆ ಎಟಿಎಂ ಕಾರ್ಡ್ ಕೊಟ್ಟು ಪಿನ್ ನಂಬರ್ ಅನ್ನು ಹೇಳಿದ್ದ ಸಂಜಯ್ ಕುಮಾರ್ ಅವರ ಕಾರ್ಡ್ ತಮ್ಮ ಬಳಿಯೇ ಇಟ್ಟುಕೊಂಡು ಅವರ ಬಳಿಯಿದ್ದ ಬೇರೆ ಕಾರ್ಡ್ ಕೊಟ್ಟಿದ್ದರು. ತದ ನಂತರ ಪಕ್ಕದಲ್ಲೇ ಇದ್ದ ಎಟಿಎಂ ನಿಂದ 75 ಸಾವಿರ ಹಣ ಡ್ರಾ ಮಾಡಿಕೊಂಡು ವಂಚನೆ ಎಸಗಿ ನಾಪತ್ತೆಯಾಗಿದ್ದರು. ಇತ್ತ ತಮ್ಮ ಖಾತೆಯಿಂದ ಹಣ ಡ್ರಾ ಆದ ಬಗ್ಗೆ ಖಾತೆದಾರನಿಗೆ ಮೆಸೆಜ್ಗಳು ಬಂದಿದ್ದವು. ಕೂಡಲೇ ಎಚ್ಚೆತ್ತುಕೊಂಡ ದೂರುದಾರ ಸಂಜಯ್ ಕುಮಾರ್ ಘಟನೆ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೋಲೀಸರು ಆರೋಪಿಗಳ ಎಡೆಮುರಿಕಟ್ಟಿ, ಮತ್ತಷ್ಟು ಅಮಾಯಕ ಜನರು ಮೋಸ ಹೋಗುವುದನ್ನು ತಪ್ಪಿಸಿದ್ದಲ್ಲದೆ ಖತರ್ನಾಕ್ ಕಳ್ಳರು ಕಂಬಿಯಿಂದೆ ಕುಳಿತು ಮುದ್ದೆ ಮುರಿಯುವಂತೆ ಮಾಡಿದ್ದಾರೆ.