ಕ್ರೈಂ ಸ್ಟೋರಿಸಿನಿಮಾಸುದ್ದಿ

ಕೊಲೆಯಾಗಿ 10 ದಿನ ಕಳೆದರೂ ಪತ್ತೆಯಾಗಿಲ್ಲ ರೇಣುಕಾಸ್ವಾಮಿ ಮೊಬೈಲ್

ಬೆಂಗಳೂರು: ದರ್ಶನ್  ಮತ್ತು ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾಗಿ 10 ದಿನಗಳು ಕಳೆದರೂ ರೇಣುಕಾಸ್ವಾಮಿ ಮೊಬೈಲ್ ಮಾತ್ರ ಪತ್ತೆಯಾಗಿಲ್ಲ.

ಜೂನ್ 8ರಂದು ಸಂಜೆ ‘ಡಿ’ ಗ್ಯಾಂಗ್ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಿತ್ತು. ಅದೇ ದಿನ ಬೆಳಗ್ಗೆ ಆರೋಪಿಗಳು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕರೆತಂದಿದ್ದಾರೆ. ಅಂದು ಬೆಳಗ್ಗೆ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಮಧ್ಯಾಹ್ನದ ವೇಳೆ ಆರ್‌ಆರ್ ನಗರದಲ್ಲಿ ರೇಣುಕಾಸ್ವಾಮಿ ಮೊಬೈಲ್ ಅನ್ನು ಸ್ವಿಚ್‌ಆನ್ ಮಾಡಲಾಗಿದೆ. ಜೂನ್ 8ರ ಸಂಜೆ ವೇಳೆಗೆ ಪಟ್ಟಣಗೆರೆಯಲ್ಲಿ ಮತ್ತೆ ಮೊಬೈಲ್ ಸ್ವಿಚ್‌ಆಫ್ ಆಗಿದೆ. 

ಅದೇ ದಿನ ತಡರಾತ್ರಿ ರೇಣುಕಾಸ್ವಾಮಿಯನ್ನು ಹತ್ಯೆಗೈದು ಆರೋಪಿಗಳು ಮೃತದೇಹವನ್ನು ಸುಮನಹಳ್ಳಿ ಸತ್ವಾ ಅಪಾರ್ಟ್ಮೆಂಟ್ ಬಳಿ ಇರುವ ರಾಜಕಾಲುವೆ ಬಳಿ ಬಿಸಾಕಿದ್ದರು. ನಂತರ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಆರೋಪಿಗಳು ಶರಣಾಗಿದ್ದಾರೆ. ಆದರೆ ಪೊಲೀಸ್ ವಿಚಾರಣೆ ವೇಳೆ ರೇಣುಕಾಸ್ವಾಮಿ ಮೊಬೈಲ್ ಅನ್ನು ಸುಮನಹಳ್ಳಿ ರಾಜ ಕಾಲುವೆಗೆ ಬಿಸಾಕಿದ್ದಾಗಿ ಹೇಳಿದ್ದಾರೆ. ಈ ಹಿನ್ನೆಲೆ ಕಳೆದ ಹತ್ತು ದಿನಗಳಿಂದ ಹುಡುಕಾಡಿದರೂ ರೇಣುಕಾಸ್ವಾಮಿ ಮೊಬೈಲ್ ಪತ್ತೆಯಾಗಿಲ್ಲ.

ಈ ಪ್ರಕರಣದಲ್ಲಿ ರೇಣುಕಾಸ್ವಾಮಿ ಮೊಬೈಲ್ ಪ್ರಮುಖ ಸಾಕ್ಷಿಯಾಗಿದೆ. ಅಶ್ಲೀಲ ಕಮೆಂಟ್ ಸಂಬಂಧಪಟ್ಟಂತೆ ರೇಣುಕಾಸ್ವಾಮಿ ಮೊಬೈಲ್‌ನಲ್ಲೇ ಆರೋಪಿಗಳು ಕ್ಷಮಾಪಣಾ ವಿಡಿಯೋ ಮಾಡಿಸಿದ್ದರು ಎನ್ನಲಾಗಿದೆ. ಆರ್‌ಆರ್ ನಗರ, ಪಟ್ಟಣಗೆರೆ ಶೆಡ್, ಕಿಡ್ನಾಪ್ ಮಾಡಿದ ರವಿಯ ಇಟಿಯೋಸ್ ಕಾರು ಸೇರಿ ಹಲವು ಕಡೆ ಹುಡುಕಿದರೂ ಮೊಬೈಲ್ ಸುಳಿವು ಸಿಕ್ಕಿಲ್ಲ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button