ನವದೆಹಲಿ; ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ರಿಲೀಸ್ ಮಾಡಿದೆ. ನಿರೀಕ್ಷೆಯಂತೆಯೇ ವಾರಣಾಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಉತ್ತರಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಜಕ್ಷ ಅಜಯ್ ರೈರನ್ನು ಕಣಕ್ಕೆ ಇಳಿಸಿದೆ.
ವಿಶೇಷ ಅಂದರೆ, 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಅಜಯ್ ರೈ ಹೀನಾಯವಾಗಿ ಸೋಲು ಕಂಡಿದ್ದರು. 2014ರಲ್ಲಿ 3.71 ಲಕ್ಷ ಮತಗಳ ಅಂತರದಿಂದ.. 2019ರಲ್ಲಿ 4.79 ಲಕ್ಷ ಮತಗಳ ಅಂತರದಿಂದ ಮೋದಿ ವಿರುದ್ಧ ಅಜಯ್ ರೈ ಪರಾಭವಗೊಂಡಿದ್ದರು. ಆದರೆ, ಮತ್ತೆ ಅದೇ ಅಜಯ್ ರೈ ಮೇಲೆ ವಿಶ್ವಾಸವಿರಿಸಿದ ಕಾಂಗ್ರೆಸ್, ಅವರನ್ನೇ ಕಣಕ್ಕೆ ಇಳಿಸಿದೆ.
ಇಲ್ಲಿ ಗಮನಿಸಬೇಕಾದ ಅಂಶ ಎಂದರೇ, ಕಳೆದ ಎರಡು ಚುನಾವಣೆಗಳಲ್ಲಿ ಪ್ರಧಾನಿ ಮೋದಿ ವಿರುದ್ಧ ಎಲ್ಲಾ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು. 2019ರ ಚುನಾವಣೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ವಾರಣಾಸಿಯಲ್ಲಿ ಸ್ಪರ್ಧೆ ಮಾಡಿದ್ದರು. ಹೀಗಾಗಿ ಮೊದಿ ವಿರೋಧಿ ಮತಗಳು ಭಾರೀ ಪ್ರಮಾಣದಲ್ಲಿ ವಿಭಜನೆಗೊಂಡಿದ್ದವು.
ಆದರೆ, ಈ ಬಾರಿ ಅಂತಹ ಪರಿಸ್ಥಿತಿ ಇಲ್ಲ. ಮಾಯಾವತಿ ನೇತೃತ್ವದ ಬಿಎಸ್ಪಿ ಹೊರತುಪಡಿಸಿ ಉಳಿದೆಲ್ಲಾ ಪಕ್ಷಗಳು ಐಎನ್ಡಿಐಎ ಕೂಟದ ರೂಪದಲ್ಲಿ ಮೋದಿ ವಿರುದ್ಧ ಒಂದಾಗಿವೆ. ಐಎನ್ಡಿಐಎ ಕೂಟದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಅಜಯ್ ರೈ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯ ವಾರಣಾಸಿ ಕದನ ಕುತೂಹಲ ಕೆರಳಿಸಿದೆ.