ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು – ವಿಧಾನಮಂಡಲ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ!
BJP insists on Nagendra's resignation – Legislature session adjourned sine die!

ಬೆಂಗಳೂರು : ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಡೆಸಿದ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ, ವಿಧಾನಮಂಡಲದ ಕಲಾಪವನ್ನು ಮೂರು ದಿನಗಳ ಮೊದಲೇ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಒಂದು ವಾರದಿಂದ ಸದನದ ಒಳಗೆ ಹಾಗೂ ಹೊರಗೆ ಸತತವಾಗಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ, ಇಂದಿನಿಂದ ಅಹೋರಾತ್ರಿ ಧರಣಿಗೆ ಸಜ್ಜಾಗಿತ್ತು. ಆದರೆ, ಆಡಳಿತ ಪಕ್ಷವು ಕಲಾಪವನ್ನು ಮುಂಚಿತವಾಗಿ ಮೊಟಕುಗೊಳಿಸಿ ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ಕಲಾಪ ಮುಂದೂಡಿಕೆಗೂ ಮುನ್ನ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದರು. ಆರ್. ಅಶೋಕ್ ಮತ್ತು ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿಯ ಒಂದು ತಂಡ ವಿಕಾಸಸೌಧದ ಪ್ರವೇಶ ದ್ವಾರದ ಬಳಿ ನಾಗೇಂದ್ರ ವಿರುದ್ಧ ಪ್ಲೇಕಾರ್ಡ್ ಪ್ರದರ್ಶಿಸಿ ವಿಧಾನಸೌಧಕ್ಕೆ ನುಗ್ಗಲು ಯತ್ನಿಸಿತು.
ಮತ್ತೊಂದೆಡೆ, ಛಲವಾದಿ ನಾರಾಯಣಸ್ವಾಮಿ, ಡಾ. ಸಿ.ಎನ್. ಅಶ್ವಥ್ ನಾರಾಯಣ್ ಹಾಗೂ ಬಿ. ಶ್ರೀರಾಮುಲು ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಪ್ರತಿಭಟನಾಕಾರರು ಮುನ್ನುಗ್ಗದಂತೆ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿ ಕಾವಲು ಕಾದಿದ್ದರು.
ಈ ಮಧ್ಯೆ ನಾಗೇಂದ್ರ ವಿರುದ್ಧ ಸಿಬಿಐ ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿದ್ದು, ಕ್ಯಾಬಿನೆಟ್ ಸಲಹೆಯನ್ನು ರಾಜ್ಯಪಾಲರು ಕೇಳಿದ್ದಾರೆ. ಮತ್ತೊಂದೆಡೆ, ಕಳಂಕಿತ ಸಚಿವ ನಾಗೇಂದ್ರ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು ನೀಡಿದೆ.



