ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ ಈ ಬಾರಿ ಭರ್ಜರಿ ಪ್ಲ್ಯಾನ್ ಮಾಡಿದೆ. ಅದರಲ್ಲೂ ದಕ್ಷಿಣ ಭಾರತದ ಮೇಲೆ ಸ್ಪೆಷಲ್ ಫೋಕಸ್ ಮಾಡಿರುವುದು ಸ್ಪಷ್ಟವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಸಾಕಷ್ಟು ಲಕ್ಷ್ಯ ವಹಿಸಿದ್ದಾರೆ. ಉತ್ತರದಲ್ಲಿ ರಾಮ ಮಂತ್ರ.. ದಕ್ಷಿಣದಲ್ಲಿ ದ್ರಾವಿಡ ಭಾಷಾ ಸೂತ್ರ ಜೊತೆಗೆ ಕೇಸರಿ ಅಜೆಂಡಾ ಇಟ್ಟುಕೊಂಡು ಮುನ್ನುಗ್ಗಲು ರೆಡಿಯಾಗಿದೆ.
ತೆಲಂಗಾಣದಲ್ಲೂ ಈಗಾಗಲೇ ಹಲವು ಪ್ರಯೋಗಗಳನ್ನು ಮಾಡಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿರುವ ಬಿಜೆಪಿ ಇದೀಗ ಅಬ್ಬರದ ನಾಯಕನೊಬ್ಬನ ಬಾಯಿ ಮುಚ್ಚಿಸಲು, ರಾಜಕೀಯವಾಗಿ ಕಟ್ಟಿಹಾಕಲು ಚಕ್ರವ್ಯೂಹ ರಚಿಸುತ್ತಿದೆ. ಹೌದು, ಬಿಜೆಪಿ ಸಿದ್ದಾಂತ, ಕೇಂದ್ರ ಸರ್ಕಾರದ ನೀತಿಗಳನ್ನು ಪ್ರಬಲವಾಗಿ ವಿರೋಧಿಸುವ ಅಸಾದುದ್ದೀನ್ ಓವೈಸಿಗೆ ಈ ಬಾರಿ ಅವರ ಕೋಟೆಯಲ್ಲೇ ಮಣ್ಣು ಮುಕ್ಕಿಸಲು ಸ್ತ್ರೀ ಅಸ್ತ್ರವನ್ನು ಪ್ರಯೋಗ ಮಾಡ್ತಿದೆ. ಎಸ್, ಮುಂಬರುವ ಲೋಕಸಭೆ ಚುನಾವಣೆಯಲ್ಲಿ AIMIM ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ ವಿರುದ್ಧ ಬಿಜೆಪಿ ಬೆಂಕಿ ಚೆಂಡು ಮಾಧವಿ ಲತಾರನ್ನು ಕಣಕ್ಕಿಳಿಸಿದೆ.
ಈ ಮಾಧವಿ ಲತಾ ಕೊಂಪೆಲ್ಲಾ, ಭರತನಾಟ್ಯ ಕಲಾವಿದೆ. ಬಹುಮುಖ ಪ್ರತಿಭೆ. ವಿಭಿನ್ನ ಅಲೋಚನೆಗಳನ್ನು ಹೊಂದಿರುವ ಉಕ್ಕಿನ ಮಹಿಳೆ. ಹೈದರಾಬಾದ್ನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ವಿರಿಂಚಿ ಹಾಸ್ಪಿಟಲ್ಸ್ ಚೇರ್ಮನ್ ಆಗಿದ್ದಾರೆ. ಇವರ ಜೀವನ ಅನೇಕರಿಗೆ ಸ್ಪೂರ್ತಿದಾಯಕ. ಹೌದು, ಮಾಧವಿ ಲತಾ ಅವರಿಗೆ ಮೂವರು ಮಕ್ಕಳಿದ್ದು, ಯಾರನ್ನು ಶಾಲೆಗೆ ಕಳಿಸಿಲ್ಲ. ಸ್ವತಃ ಅವರೇ ಮನೆಯಲ್ಲೇ ಪಾಠ ಮಾಡಿ ಬೆಳೆಸಿದ್ದಾರೆ. ಇದೀಗ ಇಬ್ಬರು ಮಕ್ಕಳು ಐಐಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇನ್ನು ರಾಜ್ಯಶಾಸ್ತ್ರದಲ್ಲಿ ಎಂ.ಎ ಮಾಡಿರುವ ಲತಾ ಹಿಂದುತ್ವದ ಅಡಿಯಲ್ಲಿ ಎಲ್ಲಾ ಮತದಾರರನ್ನು ಸೆಳೆಯಲು ನಿರ್ಧರಿಸಿದ್ದಾರೆ. ಹಳೆಯ ಹೈದ್ರಾಬಾದ್ ಪ್ರದೇಶದಲ್ಲಿ ಚದುರಿ ಹೋಗಿರುವ ಹಿಂದೂ ಮತಗಳನ್ನು ಕ್ರೋಢಿಕರಿಸಿ ಓವೈಸಿ ಎಂಬ ಹೆಮ್ಮರವನ್ನು ರಾಜಕೀಯವಾಗಿ ನೆಲಕ್ಕುರಳಿಸಲು ಕಬ್ಬಿಣದ ನಿಲುವಿನ ಲತಾ ಪಣ ತೊಟ್ಟಿದ್ದಾರೆ. ಅವರ ಮಾತು ಹಿಂದೂತ್ವವಾದಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಕೇಳುಗರ ಮೈ ರೋಮಾಂಚನಗೊಳಿಸುತ್ತಿದೆ.
ಹೀಗಾಗಿ ಉತ್ತರ ಪ್ರದೇಶದ ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಅಸ್ತ್ರದಂತೆ ಹೈದ್ರಾಬಾದ್ ನಲ್ಲಿ ಓವೈಸಿ ವಿರುದ್ಧ ಲತಾ ಪ್ರಯೋಗಾಸ್ತ್ರ ಬಿಟ್ಟಿದೆ ಕೇಸರಿ ಪಡೆ. ಈ ಕ್ಷೇತ್ರ ಗೆದ್ದಲ್ಲಿ ಅಲ್ಪಸಂಖ್ಯಾತ ಪ್ರಾಬಲ್ಯದ ಹೈದ್ರಾಬಾದ್ನಲ್ಲಿ ಮುಂದಿನ ದಿನಗಳಲ್ಲಿ ಕೇಸರಿ ಬಾವುಟಗಳು ರಾರಾಜಿಸುವುದರಲ್ಲಿ ಅನುಮಾನವಿಲ್ಲ.