
ಕೊಡಗು: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ದುಬಾರೆ ಆನೆ ಶಿಬಿರದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ.ಎರಡು ಸಾಕಾನೆಗಳ ನಡುವೆ ನಡೆದ ಅನಿರೀಕ್ಷಿತ ಕಾದಾಟದಲ್ಲಿ ಅಚಾನಕ್ ಆಗಿ ಆನೆಯ ಅಡಿಗೆ ಸಿಲುಕಿದ ತಮಿಳುನಾಡು ಮೂಲದ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ದುಬಾರೆ ಶಿಬಿರದಲ್ಲಿ ಆನೆಗಳಿಗೆ ನದಿಯಲ್ಲಿ ಸ್ನಾನ ಮಾಡಿಸುವುದು ವಾಡಿಕೆ ಎಂದಿನಂತೆ ಸ್ನಾನ ಮಾಡಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸಾಕಾನೆಗಳಾದ ‘ಕಂಜನ್’ ಮತ್ತು ‘ಮಾರ್ತಾಂಡ’ ನಡುವೆ ಏಕಾಏಕಿ ಸಂಘರ್ಷ ಉಂಟಾಗಿದೆ. ಮಾವುತರು ನಿಯಂತ್ರಿಸಲು ಪ್ರಯತ್ನಿಸಿದರೂ, ಕಂಜನ್ ಆನೆಯು ಮಾರ್ತಾಂಡ ಆನೆಗೆ ಬಲವಾಗಿ ಗುದ್ದಿದೆ. ಈ ವೇಳೆ ಆಯತಪ್ಪಿ ಬಿದ್ದ ಮಾರ್ತಾಂಡ ಆನೆಯ ಅಡಿಯಲ್ಲಿ ಪ್ರವಾಸಿ ಮಹಿಳೆ ಝಾನ್ಸಿ (33) ಸಿಲುಕಿಕೊಂಡರು.ಈ ಘರ್ಷಣೆಯಲ್ಲಿ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮೃತ ಪ್ರವಾಸಿಗರಾದ ಝಾನ್ಸಿ ಅವರಿಗೆ 33 ವರ್ಷ ವಯಸ್ಸಾಗಿತ್ತು.ಆನೆಗಳ ನಡುವಿನ ಹಠಾತ್ ಕಾದಾಟ ಮತ್ತು ಮಾರ್ತಾಂಡ ಆನೆ ಆಯತಪ್ಪಿ ಬಿದ್ದ ಬಗ್ಗೆ ಸಮಗ್ರ ತನಿಖೆಗೆ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಆದೇಶಿಸಿದ್ದಾರೆ.
ವನ್ಯಜೀವಿಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ!
ಈ ಆಘಾತಕಾರಿ ಘಟನೆಯ ಬೆನ್ನಲ್ಲೇ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಜೊತೆಗೆ, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ: ಸಂಪರ್ಕ ನಿರ್ಬಂಧ: ಆನೆಗಳ ಸೊಂಡಿಲು ಮುಟ್ಟುವುದು ಮತ್ತು ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದು.ಆಹಾರ ನೀಡುವುದು ನಿಷಿದ್ಧ. ಪ್ರವಾಸಿಗರು ಆನೆಗಳಿಗೆ ಬೆಲ್ಲ, ಬಾಳೆಹಣ್ಣು ನೀಡುವುದನ್ನು ನಿರ್ಬಂಧಿಸುವುದು.ಅಂತರ ಕಾಯ್ದುಕೊಳ್ಳುವುದು: ವನ್ಯಜೀವಿಗಳ ಸ್ವಭಾವ ಊಹಿಸಲಸಾಧ್ಯವಾಗಿರುವುದರಿಂದ ಪ್ರವಾಸಿಗರು ನಿಗದಿತ ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಭವಿಷ್ಯದಲ್ಲಿ ಇಂತಹ ಅಚಾತುರ್ಯಗಳು ಮರುಕಳಿಸದಂತೆ ಕ್ರಮ ವಹಿಸಲು ಆದೇಶಿಸಲಾಗಿದೆ.
#FreedomTV #Kodagu #DubareElephantCamp #ElephantAttack #TouristDeath #KarnatakaForestDepartment #IshwarKhandre #CoorgNews #ElephantFight #WildlifeSafety #BreakingNewsKannada #Dubare #SafetyFirst #KarnatakaTourism