ರಾಜಕೀಯಸುದ್ದಿ

ಕಾರ್ಮಿಕರೇನು ಪ್ರಾಣಿಗಳಾ? ದಿನಕ್ಕೆ 12 ಗಂಟೆ ಕೆಲಸದ ಅವಧಿಗೆ ಹರಿಪ್ರಸಾದ್ ಕೆಂಡ

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಆಯೋಜಿಸಲಾಗಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಕಾರ್ಮಿಕರ ಹಕ್ಕುಗಳ ಪರವಾಗಿ ಧ್ವನಿ ಎತ್ತಿದ್ದಾರೆ. ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಕಂಪನಿಗೆ ನೀಡಿರುವ ಭೂಮಿಯ ಕುರಿತು ಪ್ರಸ್ತಾಪಿಸಿದ ಅವರು, ಸರ್ಕಾರ ಕೇವಲ ಒಂದು ರೂಪಾಯಿಯ ಲೆಕ್ಕದಲ್ಲಿ ನೂರಾರು ಎಕರೆ ಭೂಮಿಯನ್ನು ಕಂಪನಿಗೆ ನೀಡಿದೆ ಎಂದು ನೆನಪಿಸಿದರು. ಸುಮಾರು 317 ಎಕರೆ ಭೂಮಿಯನ್ನು ಇನ್ಫೋಸಿಸ್ ಸಂಸ್ಥೆಗೆ ಒದಗಿಸಲಾಗಿದೆ ಎಂಬ ಅಂಶವನ್ನು ಉಲ್ಲೇಖಿಸುವ ಮೂಲಕ, ಉದ್ಯಮ ಸಂಸ್ಥೆಗಳ ಬೆಳವಣಿಗೆಯಲ್ಲಿ ಸರ್ಕಾರದ ಪಾತ್ರ ಮತ್ತು ಸಾರ್ವಜನಿಕ ಆಸ್ತಿಯ ಬಳಕೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಹರಿಪ್ರಸಾದ್, ಕಾರ್ಮಿಕರ ಕೆಲಸದ ಅವಧಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಾರ್ಮಿಕರ ಹಿತದೃಷ್ಟಿಯಿಂದ ದಿನಕ್ಕೆ 8 ಗಂಟೆ ಕೆಲಸದ ಅವಧಿಯನ್ನು ನಿಗದಿಪಡಿಸಿದ್ದಾರೆ. ಆದರೆ, ಕೆಲವರು ವಾರಕ್ಕೆ 70 ರಿಂದ 75 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಹೇಳುತ್ತಿದ್ದಾರೆ. ಅಂದರೆ ದಿನಕ್ಕೆ 12 ಗಂಟೆಗಳ ಕಾಲ ದುಡಿಯಬೇಕು ಎಂಬುದು ಅವರ ವಾದವಾಗಿದೆ. ನಾವು ಮನುಷ್ಯರೇ ಹೊರತು ಪ್ರಾಣಿಗಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇಂತಹ ಹೇಳಿಕೆಗಳು ಕಾರ್ಮಿಕರ ಶೋಷಣೆಗೆ ದಾರಿ ಮಾಡಿಕೊಡುತ್ತವೆ ಎಂದು ಕಿಡಿಕಾರಿದರು.

ಮಾಲೀಕ ಮತ್ತು ಕಾರ್ಮಿಕರ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ ಅವರು, ಮಾಲೀಕರು ಕೇವಲ ಕೆಲಸ ನೀಡಬಲ್ಲರು, ಆದರೆ ಕಾರ್ಮಿಕರು ಕೆಲಸ ಮಾಡಿದರೆ ಮಾತ್ರ ಅವರು ಮಾಲೀಕರಾಗಿ ಉಳಿಯಲು ಸಾಧ್ಯ ಎಂದು ಪ್ರತಿಪಾದಿಸಿದರು. ಉದ್ದಿಮೆ ಮತ್ತು ಕಾರ್ಮಿಕ ವರ್ಗ ಎರಡೂ ಒಟ್ಟಾಗಿ ಸಾಗಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂಬ ಸಂದೇಶ ನೀಡಿದ ಹರಿಪ್ರಸಾದ್, ಕಾರ್ಮಿಕರು ತಮ್ಮ ಸ್ವಾಭಿಮಾನ, ಹಕ್ಕು ಮತ್ತು ಸಮಾನತೆಗಾಗಿ ಸದಾ ಹೋರಾಟ ಮಾಡಬೇಕು ಎಂದು ಕರೆ ನೀಡಿದರು. ಸಂಸತ್ತಿನಲ್ಲಿ ಚಂದ್ರಶೇಖರ್ ಅವರು ಕಾರ್ಮಿಕರ ಪರವಾಗಿ ಪರಿಣಾಮಕಾರಿಯಾಗಿ ಮಾತನಾಡಿದ್ದನ್ನು ಸಹ ಈ ಸಂದರ್ಭದಲ್ಲಿ ಹರಿಪ್ರಸಾದ್ ಶ್ಲಾಘಿಸಿದರು.

Comments (0)

Your email address will not be published. Required fields are marked *

Back to top button