ಸಿನಿಮಾಸುದ್ದಿ

‘ಮೃತ್ಯುದೇವತೆ’ ಟ್ರೇಲರ್ ಬಿಡುಗಡೆ: ನಟ- ನವೀನ್ ಮಹದೇವ್ ಮೊದಲ ಸಾಹಸ..!

ನವೀನ್‍ ಮಹದೇವ ಮೊದಲ ಬಾರಿಗೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿರುವ ‘ಮೃತ್ಯುದೇವತೆ’ ಚಿತ್ರದ ಕೆಲಸಗಳು ಸಂಪೂರ್ಣವಾಗಿ ಮುಗಿದು, ಬಿಡುಗಡೆಯ ಹಂತಕ್ಕೆ ಬಂದಿದೆ.

ಅದಕ್ಕೂ ಮೊದಲು ಗುರುವಾರ ಸಂಜೆ ಉತ್ಸವ್‍ ಲೆಗಸಿ ಸಭಾಂಗಣದಲ್ಲಿ ಚಿತ್ರದ ‘ಕಾಳಿ’ ಮತ್ತು ‘ಮಹದೇವ’ ಹಾಡುಗಳಲ್ಲದೆ ಟ್ರೇಲರ್ ಸಹ ಬಿಡುಗಡೆಯಾಯಿತು. ಮಾಜಿ ಕೌನ್ಸಿಲರ್ ಮತ್ತು ಉದ್ಯಮಿ ಕೆ. ರಮೇಶ್‍ ಟ್ರೇಲರ್ ಬಿಡುಗಡೆ ಮಾಡಿದರೆ, ಉದ್ಯಮಿ ಹಾಗೂ ಸಮಾಜಸೇವಕರಾದ ಶ್ರೀನಿವಾಸ್‍ ಅವರು ‘ಮಹಾದೇವ’ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದಲ್ಲೊಂದು ಪ್ರಮುಖ ಪಾತ್ರ ನಿರ್ವಹಿಸಿರುವ ಹಿರಿಯ ನಟಿ ವಿನಯಾ ಪ್ರಸಾದ್‍, ‘ಕಾಳಿ’ ಹಾಡಿನ ಮೇಕಿಂಗ್‍ ವೀಡಿಯೋ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ನವೀನ್‍ ಮಹಾದೇವ್‍, ‘ಇದಕ್ಕೂ ಮೊದಲು ಕಿರುಚಿತ್ರ ಮಾಡಿದ್ದೆ. ಅದರ ಬಿಡುಗಡೆಗೂ ಮೊದಲೇ ‘ಮೃತ್ಯುದೇವತೆ’ ಚಿತ್ರಕ್ಕೆ ಮೊದಲ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ಹೆಣ್ಮಕ್ಕಳು ಅದೆಷ್ಟೇ ಬುದ್ಧಿವಂತರಾದರೂ, ಎಷ್ಟೋ ಓದಿಕೊಂಡಿದ್ದರೂ ಕೆಲವೊಮ್ಮೆ ಗೊತ್ತಿಲ್ಲದೆ ಯಾವುದೋ ಬಲೆಗೆ ಬೀಳುತ್ತಾರೆ. ಅದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ‘ಕುಡಿತ, ದುಡ್ಡು, ಕೆಟ್ಟ ಸಹವಾಸ ಮತ್ತು ದುರಹಂಕಾರ ಇರುವವರ ಜೊತೆಗೆ ಮಾನಕ್ಕೆ ಅಂಜುವ ಹೆಣ್ಣು ಮಕ್ಕಳು ಇರಬಾರದು’ ಎಂಬ ಸಂಭಾಷಣೆಯೊಂದು ಚಿತ್ರದಲ್ಲಿದೆ. ಇದೆಲ್ಲದರಿಂದ ತೊಂದರೆಗೊಳಗಾದ ಹುಡುಗಿ ಸಹನೆಯಿಂದ ಈ ಮಾತು ಹೇಳಿ ಎದ್ದು ಹೋಗುತ್ತಾಳೆ. ಆ ತೊಂದರೆ ಅತಿರೇಕಕ್ಕೆ ಹೋದಾಗ ಹುಡುಗಿ ಮೃತ್ಯದೇವತೆ, ಚಂಡಿ-ಚಾಮುಂಡಿ ಅವತಾರ ತಾಳುತ್ತಾಳೆ. ಅದೇ ಈ ಚಿತ್ರದ ಕಥಾವಸ್ತು. ಹೊಸಬರೇನು ಮಾಡಿದ್ದಾರೆ ಅಂದುಕೊಳ್ಳದೆ ಚಿತ್ರವನ್ನು ನೋಡಿ ಹರಸಿ-ಹಾರೈಸಿ. ಚಿತ್ರವನ್ನು ಡಾ. ರಾಜಕುಮಾರ್‍ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡುವ ಯೋಚನೆ ಇದೆ. ಈಗಾಗಲೇ ಚಿತ್ರ ಸಂಪೂರ್ಣವಾಗಿದ್ದು, ಸದ್ಯದಲ್ಲೇ ಸೆನ್ಸಾರ್‍ ಆಗಲಿದೆ’ ಎಂದು ಹೇಳಿದರು.

ಇದಕ್ಕೂ ಮೊದಲು ‘ಸಹಾರಾ’ ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಿದ್ದ ಸಾರಿಕಾ, ‘ಈ ಚಿತ್ರದಲ್ಲಿ ನನ್ನದು ಆರತಿ ಎಂಬ ಪಾತ್ರ. ಆಕೆ ತುಂಬಾ ಮುಗ್ಧತೆ ಇರುವ ಹುಡುಗಿ. ಅಂತವಳನ್ನು ಕೆಣಕಿದಾಗ, ಯಾವ ಮಟ್ಟಕ್ಕೆ ಹೋಗಬಹುದು ಎಂದು ತೋರಿಸುವ ಪಾತ್ರ ನನ್ನದು. ಈ ಚಿತ್ರದಲ್ಲಿ ಮೊದಲ ಬಾರಿಗೆ ಫೈಟಿಂಗ್‍ ಸಹ ಮಾಡಿದ್ದೇನೆ. ಛಾಯಾಗ್ರಾಹಕ ಅನಿರುದ್ಧ್ ನಮ್ಮನ್ನೆಲ್ಲಾ ಬಹಳ ಚೆನ್ನಾಗಿ ತೋರಿಸಿದ್ದಾರೆ. ಹಲವು ದಿನಗಳ ಕಾಲ ನಾನು ಸೂರ್ಯನನ್ನೇ ನೋಡಿರಲಿಲ್ಲ. ಏಕೆಂದರೆ, ಸತತವಾಗಿ ರಾತ್ರಿ ಹೊತ್ತು ಚಿತ್ರೀಕರಣ ಮಾಡಿದ್ದೇವೆ. ರಾತ್ರಿ ಕಾಡಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಚಿತ್ರತಂಡ ಕೊಟ್ಟ ಸಂಪೂರ್ಣ ಸಹಕಾರ ಮತ್ತು ಪ್ರೋತ್ಸಾಹದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ವಿನಯಾ ಪ್ರಸಾದ್‍ರಂತಹ ಹಿರಿಯರ ಜೊತೆಗೆ ಕೆಲಸ ಮಾಡಿದ ಅನುಭವ ಅದ್ಭುತವಾಗಿತ್ತು. ಅವರಿಂದ ಕಲಿಯುವುದು ಬಹಳಷ್ಟಿತ್ತು’ ಎಂದರು.

ಈ ತಂಡದ ಒಂದು ವೈಷಿಷ್ಟ್ಯತೆ ಎಂದರೆ ಅದು ಒಗ್ಗಟ್ಟು ಎಂದು ಮಾತು ಪ್ರಾರಂಭಿಸಿದ ಹಿರಿಯ ನಟಿ ವಿನಯಾ ಪ್ರಸಾದ್, ‘ಎಲ್ಲರೂ ಕೆಲಸದ ಘನತೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡಿದ್ದಾರೆ. ಈ ಪೋಸ್ಟರ್‍ನಲ್ಲಿ ಗುಡ್ಡ-ಬೆಟ್ಟ, ಹಿಮ ಎಲ್ಲವೂ ಇದೆ. ಇದನ್ನೆಲ್ಲಾ ಪೋಸ್ಟರ್‍ಗೆ ವಿನ್ಯಾಸ ಮಾಡಿದ್ದಲ್ಲ. ಅಂಥದ್ದೊಂದು ಚೆಂದದ ವಾತಾವರಣದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಚಿತ್ರದ ಚಿತ್ರೀಕರಣವಾಗಿದೆ. ಒಳ್ಳೆಯ ಸಂದೇಶ ಕೊಡುವುದಕ್ಕೆ ಈ ಚಿತ್ರ ಮಾಡಿದ್ದಾರೆ. ಹಾಗಾಗಿ, ಈ ಚಿತ್ರ ನಿಜವಾಗಲೂ ಚೆನ್ನಾಗಿ ಮೂಡಿಬರುತ್ತದೆ ಎಂಬ ಭರವಸೆ ನನಗಿದೆ’ ಎಂದು ಹೇಳುವುದರ ಜೊತೆಗೆ, ಚಿತ್ರ ಗೆಲ್ಲಲಿ ಎಂದು ಶುಭ ಹಾರೈಸಿದರು.

ಚಿತ್ರದಲ್ಲಿ ಮತ್ತೊಂದು ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ನಟಿ ಹಿಮಶ್ರೀ ಮಾತನಾಡಿ, ‘ಈ ಚಿತ್ರದಲ್ಲಿ ಸಂಧ್ಯಾ ಎಂಬ ಹಳ್ಳಿಹುಡುಗಿಯ ಪಾತ್ರ ಮಾಡಿದ್ದೇನೆ. ಮಂಡ್ಯ ಭಾಷೆ ಮಾತನಾಡುತ್ತೇನೆ. ಇದುವರೆಗೂ ನಾನು ಯಾವತ್ತೂ ಅಂತಹ ಪಾತ್ರ ಮಾಡಿರಲಿಲ್ಲ. ನನ್ನ ಪಾತ್ರಕ್ಕೆ ಮೇಕಪ್‍ ಸಹ ಇಲ್ಲ. ಚಿತ್ರದಲ್ಲಿ ನನಗೊಂದು ಹಾಡು ಇದೆ. ಒಂದೊಳ್ಳೆಯ ಚಿತ್ರ ಮಾಡಿದ್ದೇವೆ ಎಂಬ ಖುಷಿ ಇದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ’ ಎಂದರು.

‘ಮೃತ್ಯದೇವತೆ’ ಚಿತ್ರದಲ್ಲಿ ಸಾರಿಕಾ ಮತ್ತು ವಿನಯಾ ಪ್ರಸಾದ್‍ ಅವರ ಜೊತೆಗೆ ನವೀನ್‍ ಮಹದೇವ, ಹಿಮಶ್ರೀ, ಡಯಾನ, ಮಾಹಿನ್‍ ಕುಬೇರ, ಸೂರ್ಯ, ಪವನ್‍, ವರ್ಷಿತಾ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ಛಾಯಾಗ್ರಹಣ, ಶಿವಪ್ರಸಾದ್‍ ಸಂಗೀತವಿದ್ದು, ರಘು ಅವರ ನೃತ್ಯ ನಿರ್ದೇಶನ, ಅಲ್ಟಿಮೇಟ್‍ ಶಿವು ಹಾಗೂ ಚಿಟ್ಟ ಜಾಧವ್‍ ಅವರ ಸಾಹಸ ನಿರ್ದೇಶನ ಮತ್ತು ವಿಕ್ರಮಾದಿತ್ಯ ಅವರ ಸಂಕಲನವಿದೆ. ಚಿತ್ರವನ್ನು ನವೀನ್‍ ಮಹದೇವ್‍ ಅವರ ಪತ್ನಿ ಸರಸ್ವತಿ, ವರ್ಷಿತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಿಸಿದ್ದಾರೆ.

Comments (0)

Your email address will not be published. Required fields are marked *

Back to top button