ಚಿಕ್ಕಬಳ್ಳಾಪುರ: ಚಿಂತಾಮಣಿಯಲ್ಲಿ ಮನುಷ್ಯತ್ವವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ನವಜಾತ ಶಿಶುವೊಂದನ್ನು ಶೌಚಾಲಯಕ್ಕೆ ಎಸೆದು ಹೋದ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ನಗರದ ತಪತೇಶ್ವರ ಕಾಲೋನಿಯ ಮನೆಯೊಂದರ ಮುಂದಿರುವ ಶೌಚಾಲಯದಲ್ಲಿ ಶನಿವಾರ ರಾತ್ರಿ ಮೃತ ನವಜಾತ ಶಿಶು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಭಾರಿ ಆತಂಕ ಮೂಡಿಸಿದೆ.
ಯಾರೋ ದುಷ್ಕರ್ಮಿಗಳು ಮಗುವನ್ನು ಎಸೆದು ಪರಾರಿಯಾಗಿದ್ದು, ಮಗು ಈಗಾಗಲೇ ಮೃತಪಟ್ಟಿದೆ. ವಿಷಯ ತಿಳಿದ ತಕ್ಷಣ ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ವೀಜಿ ಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಕ್ಷ್ಯ ಸಂಗ್ರಹಕ್ಕಾಗಿ ಚಿಕ್ಕಬಳ್ಳಾಪುರದಿಂದ ಬೆರಳಚ್ಚು ತಜ್ಞರ ತಂಡವನ್ನೂ ಕರೆಯಿಸಲಾಗಿದ್ದು, ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದಾರೆ.


