ಕೊಡಗು: ಕಾಡಾನೆಗಳ ಅಟ್ಟಹಾಸ ಮುಂದುವರಿದಿದ್ದು, ಕಾಲೇಜಿನಿಂದ ಮನೆಗೆ ಮರಳುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ಕಾಡಾನೆ ದಾಳಿಗೆ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ಮಡಿಕೇರಿ ತಾಲೂಕಿನ ಬೆಟ್ಟತೂರು ಗ್ರಾಮದಲ್ಲಿ ನಡೆದಿದೆ.
ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟತೂರು ಗ್ರಾಮದ ಗಿರೀಶ್ ಎಂಬುವವರ ಪುತ್ರಿ ಪೂಜಾ ಮೃತ ದುರ್ದೈವಿ. ಈಕೆ ಮಡಿಕೇರಿಯ ಸಂತ ಮೈಕೆಲ್ ಶಾಲೆಯಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು.ಸಂಜೆ 5:30ರ ಸುಮಾರಿಗೆ ಕಾಲೇಜು ಮುಗಿಸಿ ಬಸ್ಸಿನಲ್ಲಿ ಬೆಟ್ಟತೂರಿಗೆ ಬಂದಿಳಿದ ಪೂಜಾ, ಬಸ್ ನಿಲ್ದಾಣದಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಏಕಾಏಕಿ ರಸ್ತೆಗೆ ಬಂದ ಕಾಡಾನೆ ಆಕೆಯ ಮೇಲೆ ಭೀಕರವಾಗಿ ದಾಳಿ ನಡೆಸಿದೆ.
ಆನೆಯ ತುಳಿತಕ್ಕೆ ಸಿಲುಕಿದ ಪೂಜಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆನೆ ದಾಳಿ ತಡೆಯುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.


