ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತು ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಕಾಂಬಿನೇಷನ್ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ನಿರಾಸೆಯ ಸುದ್ದಿಯೊಂದು ಕೇಳಿಬಂದಿದೆ. ‘ಅನಿಮಲ್’ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತು ಪ್ರಭಾಸ್ ಕಾಂಬಿನೇಷನ್ನ ಬಹುನಿರೀಕ್ಷಿತ ‘ಸ್ಪಿರಿಟ್’ ಸಿನಿಮಾದಿಂದ ಪ್ರಕಾಶ್ ರಾಜ್ ಹೊರನಡೆದಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಚಿತ್ರದ ಕಥೆ ಅಥವಾ ಪಾತ್ರದ ವಿಚಾರವಾಗಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತು ಪ್ರಕಾಶ್ ರಾಜ್ ನಡುವೆ ಸಣ್ಣ ಭಿನ್ನಾಭಿಪ್ರಾಯ ಉಂಟಾಗಿದ್ದು, ಅದು ದೊಡ್ಡ ಜಗಳಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಭಿನ್ನಾಭಿಪ್ರಾಯದಿಂದಾಗಿ ನಟ ಪ್ರಕಾಶ್ ರಾಜ್ ಅವರು ಚಿತ್ರತಂಡದಿಂದ ಹೊರಬರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಅಥವಾ ನಟ ಪ್ರಕಾಶ್ ರಾಜ್ ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲವಾದರೂ, ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ದೊಡ್ಡ ಚರ್ಚೆಯೇ ನಡೆಯುತ್ತಿದೆ.
ಪ್ರಕಾಶ್ ರಾಜ್ ಅವರು ಕೇವಲ ನಟನಾಗಿ ಮಾತ್ರವಲ್ಲದೆ, ತಮ್ಮ ಖಡಕ್ ಸಿದ್ಧಾಂತಗಳಿಂದಲೂ ಆಗಾಗ ಸುದ್ದಿಯಲ್ಲಿರುವವರು. ಇತ್ತೀಚೆಗಷ್ಟೇ ನಟ ಜಗ್ಗೇಶ್ ಅವರ ಆರ್ಎಸ್ಎಸ್ ಕುರಿತಾದ ಟ್ವೀಟ್ ವಿಚಾರದಲ್ಲೂ ಪ್ರಕಾಶ್ ರಾಜ್ ಹೆಸರು ತಳುಕುಹಾಕಿಕೊಂಡಿತ್ತು. ವಿಲನ್ ಹಾಗೂ ಪೋಷಕ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸುವ ಪ್ರಕಾಶ್ ರಾಜ್ ಅವರು ‘ಸ್ಪಿರಿಟ್’ ಚಿತ್ರದಲ್ಲೂ ಒಂದು ಪ್ರಮುಖ ಪಾತ್ರ ಮಾಡಬೇಕಿತ್ತು. ಆದರೆ ಇದೀಗ ಅವರು ಸಿನಿಮಾದಿಂದ ಹೊರಬಂದಿರುವುದು ಚಿತ್ರದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಕುತೂಹಲ ಮೂಡಿಸಿದೆ.


