ಜಿಲ್ಲೆರಾಜಕೀಯರಾಜ್ಯಸುದ್ದಿ

RSS ಟೀಕಾಕಾರರಿಗೆ ಜಗ್ಗೇಶ್ ಸವಾಲ್; ಪ್ರಕಾಶ್ ರಾಜ್‌ಗೂ ಶಾಖೆಗೆ ಬರುವಂತೆ ಆಹ್ವಾನ!

ಅರಸೀಕೆರೆ: ಶಾಸಕ ಶಿವಲಿಂಗೇಗೌಡರು ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಕುರಿತು ನೀಡಿದ್ದ ಹೇಳಿಕೆಗೆ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಸಂಘದ ಬಗ್ಗೆ ಸರಿಯಾದ ಅರಿವಿಲ್ಲದೆ ಹಗುರವಾಗಿ ಮಾತನಾಡುವವರು ಒಮ್ಮೆ ಸಂಘದ ಶಾಖೆಗೆ ಭೇಟಿ ನೀಡಿ, ಅಲ್ಲಿನ ದೇಶಚಿಂತನೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಜಗ್ಗೇಶ್, ಶಾಸಕರನ್ನು “ದಡ್ಡ” ಮತ್ತು “ಅಜ್ಞಾನಿ” ಎಂದು ಸಂಬೋಧಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಸಂಘದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಜಗ್ಗೇಶ್ ಅವರು ಹೆಸರಾಂತ ಕಲಾವಿದ ಪ್ರಕಾಶ್ ಬೆಳವಾಡಿ ಅವರ ಅನುಭವದ ವಿಡಿಯೋವನ್ನು ಉದಾಹರಣೆಯಾಗಿ ಬಳಸಿಕೊಂಡಿದ್ದಾರೆ. ಆರ್‌ಎಸ್‌ಎಸ್ ಎಂದರೆ ಕೇವಲ ಒಂದು ಸಮುದಾಯಕ್ಕೆ ಸೀಮಿತ ಎಂಬ ಭಾವನೆ ತಪ್ಪು ಎಂದು ಹೇಳಿರುವ ಅವರು, ಪ್ರಕಾಶ್ ಬೆಳವಾಡಿ ಅವರು ಮೊದಲು ಸಂಘವನ್ನು ವಿರೋಧಿಸುತ್ತಿದ್ದರೂ, ನಂತರ ಅಲ್ಲಿನ ಶಿಸ್ತು ಮತ್ತು ರಾಷ್ಟ್ರಪ್ರೇಮವನ್ನು ಕಂಡು ಹೇಗೆ ಬದಲಾದರು ಎಂಬುದನ್ನು ವಿವರಿಸಿದ್ದಾರೆ. ಇದೇ ಸಂದರ್ಭದಲ್ಲಿ ನಟ ಪ್ರಕಾಶ್ ರಾಜ್ ಅವರಿಗೂ ಆಹ್ವಾನ ನೀಡಿರುವ ಜಗ್ಗೇಶ್, ಟೀಕೆ ಮಾಡುವ ಮೊದಲು ಸಂಘದ ಕಾರ್ಯವೈಖರಿಯನ್ನು ಹತ್ತಿರದಿಂದ ಗಮನಿಸಿ ಎಂದು ಹೇಳಿದ್ದಾರೆ.

ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಇತ್ತೀಚೆಗೆ ಆರ್‌ಎಸ್‌ಎಸ್ ಬಗ್ಗೆ ನಡೆದ ಚರ್ಚೆಗಳು ಸಂಘದ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದವು. ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್, ರಾಜಕೀಯ ಲಾಭಕ್ಕಾಗಿ ಸಂಘಟನೆಯನ್ನು ಎಳೆದು ತರುವುದು ಸರಿಯಲ್ಲ. ಸಂಘದ ಬಗ್ಗೆ ಅರಿವಿರದ ಅನೇಕರು ಇಂತಹ ಹೇಳಿಕೆ ನೀಡುತ್ತಿದ್ದಾರೆ, ಒಮ್ಮೆ ಭೇಟಿ ಕೊಟ್ಟರೆ ನಿಮ್ಮ ಮನಸ್ಥಿತಿ ಬದಲಾಗುತ್ತದೆ” ಎಂದಿದ್ದು ಈ ಬೆಳವಣಿಗೆಯು ಈಗ ರಾಜ್ಯ ರಾಜಕೀಯ ಮತ್ತು ಚಿತ್ರರಂಗದ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Comments (0)

Your email address will not be published. Required fields are marked *

Back to top button