ಕಲಬುರಗಿ: ಎರಡು ಕೆಎಸ್ಆರ್ಟಿಸಿ ಬಸ್ ಮತ್ತು ಜೀಪ್ ನಡುವೆ ಸರಣಿ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ಕಲಬುರಗಿ – ಅಫಜಲಪುರ ನಡುವಿನ ರಾಷ್ಟ್ರೀಯ ಹೆದ್ದಾರಿ ಮಾದರಿ ರಸ್ತೆಯಲ್ಲಿ ನಡೆದಿದೆ..
ಸುಲೋಚನಾ(70), ಚಂದ್ರಕಾಂತ್ (82) ಮತ್ತು ಚಾಲಕ ಮಿಟ್ಟೆಸಾಬ್(35) ಮೃತರು. ಇನ್ನು ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಕಲಬುರಗಿ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಕೂಡ ವಿಚಾರಿಸಿದ್ದಾರೆ. ಕಲಬುರಗಿಯಿಂದ ಅಫಜಲಪುರಕ್ಕೆ ಹೊರಟಿದ್ದ ಬಸ್ ಹಾಗೂ ಅಫಜಲಪುರದಿಂದ ಕಲಬುರಗಿಗೆ ಬರುತ್ತಿದ್ದ ಜೀಪ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಜೀಪ್ ನಜ್ಜುಗುಜ್ಜಾಗಿದೆ.
ಜೀಪ್ ನಲ್ಲಿದ್ದ ಚಂದ್ರಕಾಂತ ಚಿತ್ತಪುರ, ಸುಲೋಚನಾ ಚಂದ್ರಕಾಂತ ಚಿತ್ತಪುರ ಹಾಗೂ ಮಿಟ್ಟುಸಾಬ ರಸೂಲ್ ಪಟೇಲ್ ಎನ್ನುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಅಫಜಲಪುರ ತಾಲೂಕಿನ ತೆಲ್ಲೋಣಿ ಗ್ರಾಮದವರಾಗಿದ್ದಾರೆ. ಚಂದ್ರಕಾಂತ ಹಾಗೂ ಸುಲೋಚನಾ ದಂಪತಿಗಳಾಗಿದ್ದಾರೆ. ಬಸ್ ನಲ್ಲಿದ್ದ ಗುರುದೇವಿ, ವಿಜಯಲಕ್ಷ್ಮಿ ಹಾಗೂ ಚಂಚಲಪ್ಪ ಎನ್ನುವರು ಗಾಯಗೊಂಡಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..


