ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಜೊತೆಗೆ ಕೇಳಿ ಬರುತ್ತಿರುವ ಹೆಸರು ಕರ್ನಲ್ ಸೋಫಿಯಾ ಖುರೇಷಿ ಅವರದ್ದು. ಕನ್ನಡಿಗರು ಈಕೆ ನಮ್ಮ ಹೆಮ್ಮೆಯ ಸೊಸೆ ಎಂದು ಗುಣಗಾನ ಮಾಡುತ್ತಿದ್ದಾರೆ. ಆದರೆ, ಇದು ಕರ್ನಲ್ ಸೋಫಿಯಾ ಅವರ ಸಾಧನೆಗಳ ಕುರಿತು 2020ರಲ್ಲಿಯೇ ಸುಪ್ರೀಂಕೋರ್ಟ್ ಮೆಚ್ಚುಗೆ ಸೂಚಿಸಿತ್ತು.
ಭಾರತೀಯ ಸೇನೆಯ ಮಹಿಳಾ ಅಧಿಕಾರಿಗಳು ಸೇನಾ ಪಡೆಗೆ ಕೀರ್ತಿ ತಂದಿದ್ದಾರೆ ಎಂದು ನಿಕಟಪೂರ್ವ ಮುಖ್ಯನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಅಜಯ್ ರಾಸ್ತೋಗಿ ಅವರಿದ್ದ ಪೀಠ ಶ್ಲಾಘಿಸಿತ್ತು.
ಮಹಿಳಾ ಸಾಧಕಿಯರ ಹಲವು ಸಾಧನೆಗಳನ್ನು ತಿಳಿಸುವಾಗ ಸೋಫಿಯಾ ಅವರ ಹೆಸರನ್ನು ಪ್ರಸ್ತಾಪಿಸಿತ್ತು.ಸಶಸ್ತ್ರ ಪಡೆಗಳ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಕಮಿಷನ್ ನೀಡುವ ಮಹತ್ವದ ತೀರ್ಪಿನಲ್ಲಿ ಅದು ಅವರ ಗುಣಗಾನ ಮಾಡಿತ್ತು.
ಒಂದು ವರ್ಷದ ಬಳಿಕ ತೀರ್ಪಿನ ಅನ್ವಯ ಹನ್ನೊಂದು ಮಹಿಳಾ ಸೇನಾ ಅಧಿಕಾರಿಗಳಿಗೆ ಶಾಶ್ವತ ಕಮಿಷನ್ ಸೌಲಭ್ಯ ನೀಡದ ಭಾರತೀಯ ಸೇನೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಮುಂದಾಗುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತ್ತು. ಈ ಬೆನ್ನಲ್ಲೇ ಹನ್ನೊಂದು ಮಂದಿ ಮಹಿಳಾ ಅಧಿಕಾರಿಗಳಿಗೆ ನಿವೃತ್ತಿಯವರೆಗೆ ಸೇವೆಯ ಅವಕಾಶ ಕಲ್ಪಿಸುವ ಶಾಶ್ವತ ಕಮಿಷನ್ ಸೌಲಭ್ಯ ಕಲ್ಪಿಸಲು ಸಿದ್ಧವೆಂದು ಸೇನೆ ಹೇಳಿತ್ತು.