ದೇಶ/ವಿದೇಶ

ಪಾಕಿಸ್ತಾನಕ್ಕೆ ಮತ್ತೊಂದು ನದಿ ನೀರು ಬಂದ್!

ಭಾರತದ ವಿರುದ್ಧ ಯುದ್ಧ ಸಾರಿರುವ ಪಾಕಿಸ್ತಾನಕ್ಕೆ ಈಗಾಗಲೇ ಸಿಂಧು ನದಿ ನೀರನ್ನು ನಿಲ್ಲಿಸಲಾಗಿದೆ. ಇದರ ಜೊತೆಗೆ ಚೆನಾಬ್ ನದಿ ನೀರನ್ನುಕೂಡ ಸ್ಥಗಿತಗೊಳಿಸಲಾಗಿದೆ. ಪಹಲ್ಗಾಮ್‌ ನರಮೇಧದ ನಂತರ ಭಾರತ ಪಾಕಿಸ್ತಾನಕ್ಕೆ ರಾಜತಾಂತ್ರಿಕವಾಗಿ ಬಲವಾದ ಪೆಟ್ಟಿನ ಮೇಲೆ ಪೆಟ್ಟು ಕೊಡ್ತಿದೆ.

ಏಪ್ರಿಲ್ 22ರ ದಾಳಿ ಬಳಿಕ ಸಿಂಧು ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿತ್ತು. ಇದಾದ ಬಳಿಕ ನಿನ್ನೆಯಿಂದಲೇ ಚೆನಾಬ್‌ ನದಿಯ ಮೂಲಕ ಹರಿಯುತ್ತಿದ್ದ ನೀರನ್ನು ಕೂಡ ನಿಲ್ಲಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ರಾಂಬನ್‌ ಬಳಿಯ ಬಾಗ್ಲಿಹಾರ್‌ ಜಲಾಶಯದಿಂದ ಹರಿಯುತ್ತಿದ್ದ ನೀರನ್ನು ನಿಲ್ಲಿಸಲಾಗಿದೆ. ಇದೇ ಮಾದರಿಯಲ್ಲಿ ಝೀಲಂ ನದಿಗೆ ಅಡ್ಡಲಾಗಿ ಕಟ್ಟಿರುವ ಉತ್ತರ ಕಾಶ್ಮೀರದ ಕಿಶನ್‌ಗಂಗಾ ಅಣೆಕಟ್ಟೆಯಿಂದಲೂ ನೀರು ಸ್ಥಗಿತಗೊಳಿಸಲು ಸರಕಾರ ಗಂಭೀರ ಚಿಂತನೆ ನಡೆಸಿದೆ. ಈ ಕ್ರಮದಿಂದ ಪಾಕಿಸ್ತಾನದ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಪಾಕಿಸ್ತಾನದ ಕೃಷಿ, ಕುಡಿಯುವ ನೀರು, ಜಲವಿದ್ಯುತ್‌ ಯೋಜನೆಗಳಿಗೆ ಕಂಟಕ ಎದುರಾಗಲಿದೆ. ಪಾಕಿಸ್ತಾನದ ಪ್ರಮಖ ನಗರಗಳಾದ ಕರಾಚಿ, ಲಾಹೋರ್‌, ಮುಲ್ತಾನ್‌ ಸೇರಿ ಹಲವು ಜಿಲ್ಲಾಕೇಂದ್ರಗಳು, ಪ್ರಮುಖ ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಬಹುದು. ನಗರ ಕೇಂದ್ರಿತ ಕುಡಿಯುವ ನೀರಿನ ವ್ಯವಸ್ಥೆ ಕುಸಿದು ಬೀಳಬಹುದು.

ನೀರಿನ ಅಭಾವದಿಂದ ಪ್ರಮುಖ ಆಹಾರ ಹಾಗೂ ವಾಣಿಜ್ಯ ಬೆಳೆಗಳಾದ ಮೆಕ್ಕೆಜೋಳ, ಗೋಧಿ, ಭತ್ತ, ಹತ್ತಿ ಸೇರಿ ಹಲವು ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜಲ ವಿದ್ಯುತ್‌ ಘಟಕಗಳಾದ ಚಿಚೋಂಕಿ ಮಾಲಿಯನ್‌, ನಂದಿಪುರ ಜಲ ವಿದ್ಯುತ್‌ ಸ್ಥಾನವರಗಳು ಸ್ಥಗಿತಗೊಳ್ಳುವ ಅಪಾಯವಿದೆ. ಭಾರತ ನದಿ ನೀರನ್ನು ನಿಲ್ಲಿಸಿರೋದಕ್ಕೆ ಪ್ರತಿಯಾಗಿ, ಪಾಕಿಸ್ತಾನ ಪರಮಾಣು ಅಸ್ತ್ರದ ಬೆದರಿಕೆ ಹಾಕಿದ್ದು, ಉದ್ವಿಗ್ನತೆಯನ್ನು ಹೆಚ್ಚಿಸಿದೆ.

Comments (0)

Your email address will not be published. Required fields are marked *

Back to top button