#Exclusive NewsTop Newsರಾಜಕೀಯಸುದ್ದಿ
ಮಲ್ಲಿಕಾರ್ಜುನ ಖರ್ಗೆ ಹಿತ್ತಲಿನಲ್ಲಿ ಅಕ್ರಮಗಳ ತಾಂಡವ ; ಲಹರ್ ಸಿಂಗ್

ನವದೆಹಲಿ : ದೆಹಲಿಯಲ್ಲಿ ಪ್ರಜಾಪ್ರಭುತ್ವ ಉಳಿಸುವ ಕಾರ್ಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರತರಾಗಿದ್ದರೆ, ಅವರ ಹಿತ್ತಲಿನಲ್ಲಿ ಪುತ್ರ ಪ್ರಿಯಾಂಕ್ ಖರ್ಗೆ ಅವರು ಏನು ಮಾಡುತ್ತಿದ್ದಾರೆಂಬುದು ಅವರಿಗೇ ತಿಳಿದಿಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಕಟು ಟೀಕೆ ಮಾಡಿದ್ದಾರೆ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಸಂಬಂಧ ಖರ್ಗೆ ಕುಟುಂಬದ ವಿರುದ್ಧ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ತೀವ್ರ ವಾಗ್ದಾಳಿ ನಡೆಸಿದರು.
“ಗೌರವಾನ್ವಿತ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿ ಪ್ರಜಾಪ್ರಭುತ್ವ ಉಳಿಸುವ ಕಾರ್ಯದಲ್ಲಿ ನಿರತರಾಗಿರುವಾಗ, ಅವರ ಬೆನ್ನ ಹಿಂದೆ ಕಲಬುರ್ಗಿ ರಿಪಬ್ಲಿಕ್ನಲ್ಲಿ ನಡೆಯುತ್ತಿರುವುದು ಅವರಿಗೆ ತಿಳಿಯುತ್ತಿಲ್ಲ. ಮಹಾನ್ ಸಾಂವಿಧಾನಿಕ ತಜ್ಞರಂತೆ ವರ್ತಿಸುವ ಅವರ ಮಗ ಸಚಿವ ಪ್ರಿಯಾಂಕ್ ಖರ್ಗೆ ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ’’ ಎಂದು ಲಹರ್ ಸಿಂಗ್ ಉಲ್ಲೇಖಿಸಿದ್ದಾರೆ.
ಮುಂದುವರಿದು, ‘‘ಇದೊಂದೇ ಅಲ್ಲ, ಖರ್ಗೆ ಅವರ ಕುಟುಂಬದ ಟ್ರಸ್ಟ್ಗಳು ಮತ್ತು ಭೂ ಹಗರಣಗಳ ವಿವರಗಳೂ ಒಂದರ ಹಿಂದೆ ಒಂದರಂತೆ ಹೊರಬೀಳುತ್ತಿವೆ. ಅವರ ಕುಟುಂಬದ ಟ್ರಸ್ಟ್ ದಲಿತ ಕೋಟಾದಡಿ ಬೆಂಗಳೂರಿನಲ್ಲಿ ಪಡೆದ ಕೆಐಎಡಿಬಿಯ 5 ಎಕರೆ ಜಮೀನಿನ ವಿವಾದ ಜೋರಾದಾಗ ಆ ಜಾಗವನ್ನು ಟ್ರಸ್ಟ್ ಹಿಂದಿರುಗಿಸಿದೆ. ಶ್ರೀಮತಿ ಸೋನಿಯಾ ಗಾಂಧಿಯವರ ಆರ್ಟಿಐ ಕಾನೂನಿಂದಾಗಿ ಈ ಹಗರಣದ ಎಲ್ಲ ದಾಖಲೆಗಳು ಸುಲಭವಾಗಿ ಲಭ್ಯವಾಗಿದೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು’’ ಎಂದು ಸಿಂಗ್ ಹೇಳಿದ್ದಾರೆ.




