ಸಿನಿಮಾಸುದ್ದಿ

‘ನಾಡಪ್ರಭು’ ಕೆಂಪೇಗೌಡರ ಪಾತ್ರದಲ್ಲಿ ‘ಡಿಂಗ್ರಿ’ ನಾಗರಾಜ್ ಪುತ್ರ ರಾಜವರ್ಧನ್

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಹಿರಿಯ ನಿರ್ದೇಶಕ ದಿನೇಶ್ ಬಾಬು ಅವರು ‘ನಾಡಪ್ರಭು’ ಕೆಂಪೇಗೌಡರ ಬಗ್ಗೆ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಆನಂತರ ಈ ಸಿನಿಮಾದ ಬಗ್ಗೆ ಒಂದಷ್ಟು ವಿವಾದಗಳು ಕೂಡ ಸದ್ದು ಮಾಡಿದ್ದವು. ಇದೀಗ ಆ ಸಿನಿಮಾದಲ್ಲಿ ಒಂದು ಮಹತ್ತರ ಬೆಳವಣಿಗೆ ಆಗಿದೆ. ಅದೇನೆಂದರೆ, ಈ ಸಿನಿಮಾಗೆ ನಾಯಕನ ಆಯ್ಕೆ ನಡೆದಿದೆ.

ನಾಡಪ್ರಭು ಕೆಂಪೇಗೌಡರ ಪಾತ್ರದಲ್ಲಿ ರಾಜವರ್ಧನ್

ಈ ಹಿಂದೆ ‘ಬಿಚ್ಚುಗತ್ತಿ’ ಸಿನಿಮಾದಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕನ ಪಾತ್ರ ಮಾಡಿ, ಎಲ್ಲರ ಗಮನಸೆಳೆದಿದ್ದ ಡಿಂಗ್ರಿ ನಾಗರಾಜ್ ಪುತ್ರ, ನಟ ರಾಜವರ್ಧನ್ ಅವರು ಈಗ ‘ನಾಡಪ್ರಭು’ ಕೆಂಪೇಗೌಡರ ಕುರಿತ ಸಿನಿಮಾಕ್ಕೆ ಆಯ್ಕೆ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ದಿನೇಶ್ ಬಾಬು ಬಾಬು ದೊಡ್ಡ ಬಜೆಟ್‌ನಲ್ಲಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕೆಂಪೇಗೌಡರ ಕುರಿತ ಸಿನಿಮಾ ಮಾಡುತ್ತಿದ್ದು, ಅದಕ್ಕೆ ಹೀರೋ ಯಾರಾಗಬಹುದು ಎಂಬ ನಿರೀಕ್ಷೆ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಎಐ ಇಮೇಜ್ ನೋಡಿ ಫ್ಯಾನ್ಸ್ ದಿಲ್‌ಖುಷ್

ಕೆಂಪೇಗೌಡರ ಪಾತ್ರದಲ್ಲಿ ರಾಜವರ್ಧನ್ ಹೇಗೆ ಕಾಣಿಸಬಹುದು ಎಂಬುದಕ್ಕೆ ಎಐ ತಂತ್ರಜ್ಞಾನದ ಮೂಲಕ ಪೋಸ್ಟರ್‌ಗಳನ್ನು ರೆಡಿ ಮಾಡಲಾಗಿದೆ. ಇದನ್ನು ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಪೋಸ್ಟರ್‌ನಲ್ಲಿ ಇರುವಂತೆಯೇ, ರಾಜವರ್ಧನ್ ಪಾತ್ರಕ್ಕಾಗಿ ರೆಡಿಯಾದರೆ, ಸಿನಿಪ್ರಿಯರಿಗೆ ಅದಕ್ಕಿಂತ ದೊಡ್ಡ ಖುಷಿ ಇನ್ನೊಂದಿಲ್ಲ. ಸದ್ಯ ಚಿತ್ರತಂಡ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಬಹುತೇಕ ರಾಜವರ್ಧನ್‌ ಹೆಸರು ಫೈನಲ್ ಎಂಬ ಮಾತು ಕೇಳಿಬಂದಿದೆಯಾದರೂ, ನಿರ್ಮಾಪಕರ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಸಿನಿಮಾದ ಟೈಟಲ್‌

ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡ ಅವರ ಈ ಸಿನಿಮಾಗೆ ‘ಧರ್ಮಬೀರು ನಾಡಪ್ರಭು ಕೆಂಪೇಗೌಡ’ ಎಂಬ ಟೈಟಲ್ ಇಡಲಾಗಿತ್ತು. ಆದರೆ ಈಗ ಟೈಟಲ್ ವಿವಾದ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಅದೇ ಶೀರ್ಷಿಕೆ ಇರಲಿದೆಯಾ? ಬದಲಾಗಲಿದೆಯಾ ಎಂಬುದು ಇನ್ನಷ್ಟೇ ಗೊತ್ತಾಗಬೇಕು. ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಅನ್ನು ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಬರೆದಿದ್ದು ಸಂಕೇತ್ ಎಂವೈಎಸ್ ಈ ಸಿನಿಮಾಗೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಉಜ್ವಲ್ ಕುಲಕರ್ಣಿ ಸಂಕಲನವಿದ್ದು, ಸಂಗೀತವನ್ನು ಸ್ವತಃ ಕಿರಣ್ ತೋಟಂಬೈಲ್ ಅವರೇ ನೀಡುತಿದ್ದಾರೆ. ಸಂಭಾಷಣೆ ಬರೆಯುವ ಹೊಣೆ ಮಾಸ್ತಿ ಮತ್ತು ರಘು‌ ನಿಡುವಳ್ಳಿ ಅವರದ್ದು.

ಕೆಂಪೇಗೌಡರ ಕುರಿತ ಸಿನಿಮಾದ ವಿವಾದ ಏನು?

ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ ಅವರು ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಚಿತ್ರತಂಡಕ್ಕೆ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದರು. ‘ನಾಡಪ್ರಭು ಕೆಂಪೇಗೌಡ’ ಶೀರ್ಷಿಕೆಯ ಹಕ್ಕುಸ್ವಾಮ್ಯವು ಈಶ್ವರ ಎಂಟರ್‌ಟೈನ್‌ಮೆಂಟ್ ಬಳಿ ಇದೆ.

‘ನಾಡಪ್ರಭು ಕೆಂಪೇಗೌಡ’ ಸಿನಿಮಾದ ಸ್ಕ್ರಿಪ್ಟ್‌ ಟ್ರೇಡ್‌ಮಾರ್ಕ್, ಶೀರ್ಷಿಕೆ, ಬ್ರಾಂಡ್, ಪೂರ್ವಪ್ರತ್ಯಯ ಮತ್ತು ಪ್ರತ್ಯಯ ಸೇರಿಕೆ, ರಿಮೇಕ್, ಅಳವಡಿಕೆ ಕುರಿತ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸಿ ಯಾವುದೇ ರೀತಿಯಲ್ಲಿ ಪ್ರಸ್ತಾವಿತ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಚಲನಚಿತ್ರ ಕುರಿತ ನಿರ್ಮಾಣ, ನಿರ್ದೇಶನ, ಜಾಹೀರಾತು, ವಿತರಣೆ ಅಥವಾ ಸಾರ್ವಜನಿಕರಿಗೆ ಸಂವಹನಗಳನ್ನು ಮಾಡದಂತೆ ತಡೆಯಾಜ್ಞೆಯಲ್ಲಿ ಹೇಳಲಾಗಿತ್ತು. ಈ ವಿವಾದ ಸದ್ಯ ಈಗ ಯಾವ ಹಂತದಲ್ಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button