ಹೊರನಾಡು – ಇದು ಲೋಕಸಭೆ ಚುನಾವಣೆ ಸಮಯ.. ಹೊರಗಿನ ಶತ್ರುಗಳಿಗಿಂತ ಹೆಚ್ಚಾಗಿ ಒಳಗಿನ ಶತ್ರುಗಳ ಕಾಟ ಕೊಡ್ತಾರೆ ಎಂಬ ಭಯವೇ ರಾಜಕಾರಣಿಗಳನ್ನು ಹೆಚ್ಚಾಗಿ ಕಾಡುತ್ತೆ.ಇದೀಗ ಅಂಥಾದ್ದೇ ಭಯ ಬಿಜೆಪಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಕಾಡುತ್ತಿರುವಂತಿದೆ.
ಯಾಕಂದ್ರೆ, ತಮಗೆ ಯಡಿಯೂರಪ್ಪ ಅನ್ಯಾಯ ಮಾಡಿದ್ರು ಎಂದು ಕೆಎಸ್ ಈಶ್ವರಪ್ಪ ಸಿಡಿದೆದ್ದಿದ್ದಾರೆ. ಆ ಬ್ರಹ್ಮ ಬಂದರೂ ಸರಿಯೇ ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದೇ ತೀರುತ್ತೇನೆ.. ಯಡಿಯೂರಪ್ಪ ಪುತ್ರನನ್ನು ಸೋಲಿಸಿಯೇ ತಿರುತ್ತೇನೆ ಎಂದು ಶಪಥ ಮಾಡಿದ್ದಾರೆ.
ಮತ್ತೊಂದು ಕಡೆ ತಮಗೆ ಟಿಕೆಟ್ ಕೈತಪ್ಪಲು ಯಡಿಯೂರಪ್ಪ ಮತ್ತು ವಿಜಯೇಂದ್ರರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಸಿಡಿದುಕುಳಿತಿದ್ದಾರೆ. ತುಮಕೂರು ಟಿಕೆಟ್ ಕೊಡಿಸ್ತೀನಿ ಎಂದು ಕಡೆ ಕ್ಷಣದಲ್ಲಿ ಕೈಕೊಟ್ಟರು ಎಂದು ಮಾಜಿ ಮಂತ್ರಿ ಮಾಧುಸ್ವಾಮಿಯೂ ಅಸಮಾಧಾನಗೊಂಡಿದ್ದಾರೆ.
ಹೀಗೆ ಹತ್ತಾರು ನಾಯಕರು ಒಳೇಟು ಕೊಡಬಹುದು ಎಂಬ ಭೀತಿ ಯಡಿಯೂರಪ್ಪ ಮತ್ತು ಮಕ್ಕಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಹೀಗಾಗಿಯೇ ಶತ್ರುಬಾಧೆ ನಿವಾರಣೆಗಾಗಿ ಯಡಿಯೂರಪ್ಪ ಮತ್ತು ಮಕ್ಕಳು ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಚಂಡಿಕಾಯಾಗ ಮಾಡಿಸುತ್ತಿದ್ದಾರೆ.
ಇಂದು ಬೆಳಗ್ಗೆ ಅನ್ನಪೂರ್ಣೇಶ್ವರಿಯ ರಥೋತ್ಸವದಲ್ಲಿ ಸೇವೆ ಮಾಡಿದ ಯಡಿಯೂರಪ್ಪ ಮತ್ತು ವಿಜಯೇಂದ್ರ, ಅನ್ನಪೂರ್ಣೇಶ್ವರಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಗೆಲುವಿನ ವರವ ಕೊಡು ತಾಯಿ ಎಂದು ಬೇಡಿಕೊಂಡಿದ್ದಾರೆ. ಚಂಡಿಕಾಯಾಗದಲ್ಲಿ ಪತ್ನಿ ಸಮೇತ ವಿಜಯೇಂದ್ರ ಪಾಲ್ಗೊಂಡಿದ್ದಾರೆ. ಶತ್ರುಕಾಟ ನಿವಾರಿಸುವಂತೆ ಶಕ್ತಿದೇವಿಯಲ್ಲಿ ಪ್ರಾರ್ಥಿಸಿದ್ದಾರೆ.