
ರಾಜ್ಯ ಗೃಹ ಇಲಾಖೆ ಮತ್ತು ಸಚಿವರು ಗಂಭೀರವಾಗಿ ಗಮನಹರಿಸಲೇಬೇಕಾದ ಸುದ್ದಿಯೊಂದು ಈಗ ಮುನ್ನೆಲೆಗೆ ಬಂದಿದೆ. ಕರ್ನಾಟಕದ ಖಡಕ್ ಪೊಲೀಸ್ ಸಾಮ್ರಾಜ್ಯದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಆತಂಕ ಎದುರಾಗಿದ್ದು, ರಾಜ್ಯದ ಹಲವು ಪೊಲೀಸ್ ಠಾಣೆಗಳು ಇನ್ಸ್ಪೆಕ್ಟರ್ಗಳೇ ಇಲ್ಲದೆ ಬಣಗುಡುತ್ತಿವೆ. ವರ್ಗಾವಣೆ ಪ್ರಕ್ರಿಯೆಗಳು ಸರಿಯಾದ ಸಮಯಕ್ಕೆ ನಡೆಯದ ಕಾರಣ ಮತ್ತು ವರ್ಗಾವಣೆಯಾದ ಜಾಗಗಳಿಗೆ ಹೊಸ ಅಧಿಕಾರಿಗಳನ್ನು ನೇಮಕ ಮಾಡದ ಹಿನ್ನೆಲೆಯಲ್ಲಿ ಇಡೀ ವ್ಯವಸ್ಥೆ ಕುಂಟುತ್ತಾ ಸಾಗಿದೆ. ಬೆಂಗಳೂರು ಹೊರವಲಯದ ನೆಲಮಂಗಲ ಉಪವಿಭಾಗದ ತ್ಯಾಮಗೊಂಡ್ಲು ಮತ್ತು ಡಾಬಸ್ಪೇಟೆಯಂತಹ ಪ್ರಮುಖ ಠಾಣೆಗಳಲ್ಲೇ ಇನ್ಸ್ಪೆಕ್ಟರ್ಗಳಿಲ್ಲದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಂತಿದ್ದು, ಈಗಾಗಲೇ ವರ್ಗಾವಣೆಯಾಗಿರುವ ಅಧಿಕಾರಿಗಳ ಸ್ಥಾನಕ್ಕೆ ಯಾರನ್ನೂ ನೇಮಿಸಿಲ್ಲ. ಇನ್ನೊಂದೆಡೆ, ತಮ್ಮ ಅವಧಿ ಮುಗಿದು ಬೇರೆಡೆಗೆ ಹೋಗಲು ಕಾಯುತ್ತಿರುವ ಅಧಿಕಾರಿಗಳು ಅನಿವಾರ್ಯವಾಗಿ ಅದೇ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ. ಗೃಹ ಇಲಾಖೆಯ ಈ ಮೀನಾಮೇಷ ಮತ್ತು ಕುರ್ಚಿ ಕಾದಾಟದ ರಾಜಕೀಯದಿಂದಾಗಿ ಪೊಲೀಸ್ ಇಲಾಖೆ ನಿಷ್ಕ್ರಿಯವಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ಹಿರಿಯ ಅಧಿಕಾರಿಗಳ ಅನುಪಸ್ಥಿತಿಯು ಕಾನೂನು ಸುವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಸರ್ಕಾರದ ನಿರ್ಲಕ್ಷ್ಯಕ್ಕೆ ಜನಸಾಮಾನ್ಯರು ಬೆಲೆ ತೆರುವಂತಾಗಿದೆ.

ಠಾಣೆಗಳಲ್ಲಿ ಹಿರಿಯ ಅಧಿಕಾರಿಗಳು ಇಲ್ಲದ ಕಾರಣ ಸಾರ್ವಜನಿಕರು ನ್ಯಾಯಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಗಾವಣೆಯಾಗಿ ಮೂರ್ನಾಲ್ಕು ತಿಂಗಳು ಕಳೆದರೂ ಹೊಸ ನೇಮಕಾತಿ ನಡೆಯದಿರುವುದು ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೆಳಹಂತದ ಸಿಬ್ಬಂದಿಗಳಿಂದ ದೊಡ್ಡ ಪ್ರಕರಣಗಳಲ್ಲಿ ಸೂಕ್ತ ನ್ಯಾಯ ಅಥವಾ ಸ್ಪಂದನೆ ಸಿಗದೆ ದೂರುದಾರರು ಅಸಹಾಯಕರಾಗಿದ್ದಾರೆ. ಸರ್ಕಾರದ ಈ ವಿಳಂಬ ನೀತಿಯಿಂದಾಗಿ ಪ್ರಮುಖ ಠಾಣೆಗಳಲ್ಲಿ ಅಧಿಕಾರಿಗಳ ಕುರ್ಚಿಗಳು ಖಾಲಿಯಾಗಿದ್ದು, ಅಪರಾಧ ಚಟುವಟಿಕೆಗಳಿಗೆ ಪರೋಕ್ಷವಾಗಿ ದಾರಿ ಮಾಡಿಕೊಟ್ಟಂತಾಗಿದೆ. ಇದು ಕೇವಲ ಇಲಾಖೆಯ ಸಮಸ್ಯೆಯಲ್ಲ, ಬದಲಿಗೆ ರಾಜ್ಯದ ಭದ್ರತೆಯ ಪ್ರಶ್ನೆಯಾಗಿಯೂ ಕಾಣಿಸುತ್ತಿದೆ.




