ಕ್ರೈಂ ಸ್ಟೋರಿಜಿಲ್ಲೆಸುದ್ದಿ

ಹೊಸೂರಿನಲ್ಲಿ ಮದವೇರಿದ ಕಾಲೇಜು ವಿದ್ಯಾರ್ಥಿಗಳ ಅಟ್ಟಹಾಸ

ಹೊಸೂರು: ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದ ಕಾಲೇಜು ವಿದ್ಯಾರ್ಥಿಗಳು, ಪ್ರಶ್ನಿಸಲು ಬಂದ ಅಧಿಕಾರಿಯೊಬ್ಬರ ಮೇಲೆ ಉದ್ದೇಶಪೂರ್ವಕವಾಗಿ ಕಾರು ಹತ್ತಿಸಿ ಕೊಲೆ ಮಾಡಿರುವ ಘನಘೋರ ಘಟನೆ ತಮಿಳುನಾಡಿನ ಗಡಿಭಾಗವಾದ ಹೊಸೂರಿನಲ್ಲಿ ನಡೆದಿದೆ.

ಹೊಸೂರಿನ ಅಣ್ಣೈ ಅರವಿಂದ್ ನಗರದ ನಿವಾಸಿಯಾದ ಶಿವಮೂರ್ತಿ (54) ಎಂಬುವವರು ಮೃತ ದುರ್ದೈವಿ. ಇವರು ತಮಿಳುನಾಡು ಸರ್ಕಾರದ ಕಾರ್ಮಿಕ ಇಲಾಖೆಯಲ್ಲಿ ಸಹಾಯಕ ಲೇಬರ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.ಶಿವಮೂರ್ತಿಯವರು ತಮ್ಮ ಮನೆಯ ಮುಂದೆ ಬೈಕ್ ನಿಲ್ಲಿಸುತ್ತಿದ್ದ ಸಂದರ್ಭದಲ್ಲಿ, ವೇಗವಾಗಿ ಬಂದ ಕಾರೊಂದು ಇವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರು ಮದ್ಯದ ನಶೆಯಲ್ಲಿದ್ದು.. ಅಪಘಾತದಿಂದ ಕುಪಿತಗೊಂಡ ಶಿವಮೂರ್ತಿ ಮತ್ತು ಅವರ ಕುಟುಂಬಸ್ಥರು ಕಾರನ್ನು ತಡೆದು ನಿಲ್ಲಿಸಿ, ವಿದ್ಯಾರ್ಥಿಗಳ ಅಜಾಗರೂಕ ಚಾಲನೆಯನ್ನು ಪ್ರಶ್ನಿಸಿದ್ದಾರೆ. ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೂರ್ತಿ ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ವಾಗ್ವಾದ ತಾರಕಕ್ಕೇರಿದಾಗ, ಮಾನವೀಯತೆ ಮರೆತ ವಿದ್ಯಾರ್ಥಿಗಳು ಸಮಾಧಾನಗೊಳ್ಳುವ ಬದಲು ದರ್ಪ ತೋರಿದ್ದಾರೆ. ಈ ವೇಳೆ ಏಕಾಏಕಿ ಕಾರನ್ನು ವೇಗವಾಗಿ ಚಲಾಯಿಸಿ ಶಿವಮೂರ್ತಿ ಅವರ ಮೇಲೆ ಹರಿಸಿದ್ದಾರೆ.
“ಸಾರ್ವಜನಿಕವಾಗಿ ನಡೆದ ಈ ಕೃತ್ಯದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸ್ಥಳೀಯರು ಸೆರೆಹಿಡಿದ ವಿಡಿಯೋಗಳು ಬೆಚ್ಚಿಬೀಳಿಸುವಂತಿದ್ದು, ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ಈ ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಈ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಶಿವಮೂರ್ತಿಯವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಅವರ ಮಗ, ಸೊಸೆ ಹಾಗೂ ಪುಟ್ಟ ಮೊಮ್ಮಗನಿಗೂ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ಕೈಗೆತ್ತಿಕೊಂಡ ಹೊಸೂರು ಪೊಲೀಸರು ಕೃತ್ಯಕ್ಕೆ ಕಾರಣರಾದ ಆದಿತ್ಯ (20), ಹೃತಿಕ್ ಕುಮಾರ್ (19), ಹರೀಶ್ (19) ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ IPC 302 ಸೇರಿದಂತೆ ವಿವಿಧ ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ.

Comments (0)

Your email address will not be published. Required fields are marked *

Back to top button