ರಾಜಕೀಯಸುದ್ದಿ

ದೇಶದ್ರೋಹಿಗಳನ್ನು ಸಮರ್ಥಿಸಿಕೊಂಡವರು ಕ್ಷಮೆ ಕೇಳಬೇಕು: ಬಸವರಾಜ ಬೊಮ್ಮಾಯಿ ಆಗ್ರಹ

ಬೆಳಗಾವಿ: ಪಾಕಿಸ್ತಾನ ಪರ ಘೋಷಣೆ ಕೂಗಿರುವ ದೇಶದ್ರೋಹಿಗಳ ಪರ ಹಲವು ಸಚಿವರು ನಿಂತಿರುವುದು ದುರ್ದೈವ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಪಾಕ್ ಪರ ಘೋಷಣೆ ಕೂಗಿರುವುದು ಸ್ಪಷ್ಟವಾಗಿತ್ತು. ಆ ಸಂದರ್ಭದಲ್ಲಿ ಸಚಿವರು ದೇಶ ದ್ರೋಹಿಗಳ ರಕ್ಷಣೆಗೆ ನಿಂತಿದ್ದರು. ಜವಾಬ್ದಾರಿ ಮರೆತು ಕೆಲ ಸಚಿವರು ದೇಶದ್ರೋಹಿಗಳ ಪರ ನಿಂತಿದ್ದು ದುರ್ದೈವ. ಇವರ ನಡೆ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಎಫ್ ಎಸ್ ಎಲ್ ರಿಪೋರ್ಟ್ ಬಂದು ನಾಲ್ಕು ದಿನ ಕಳೆದಿದೆ. ಎರಡು ದಿನಗಳ ಹಿಂದೆ ಎನ್ ಐಎ ಎಫ್ಐಆರ್ ಮಾಡಿಕೊಂಡಿದಕ್ಕೆ ಮೂವರ ಬಂಧನವಾಗಿದೆ. ಮಾಧ್ಯಮಗಳೇ ಇದನ್ನು ಪ್ರಚೋದಿಸುತ್ತಿವೆ ಎಂದು ಸರ್ಕಾರ ದೂರಿತು. ಪತ್ರಕರ್ತರನ್ನು ಗುರಿ ಮಾಡಿಕೊಂಡು ಮಾತನಾಡಿದರು. ಪಾಕ್ ಪರ ಘೋಷಣೆ ಕೂಗಿದವರ ಸಮರ್ಥನೆ ಮಾಡಿಕೊಂಡವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಅಥಣಿ ತಾಲೂಕಿನ ಅಮ್ಮಾಜೇಶ್ವರಿ ಏತನೀರಾವರಿ ಯೋಜನೆಗೆ ಎರಡನೇ ಬಾರಿಗೆ ಶಂಕುಸ್ಥಾಪನೆ ಮಾಡುತ್ತಿರುವ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ಬಂದು 9 ತಿಂಗಳು ಕಳೆದರೂ ಯಾವುದೇ ಹೊಸ ಯೋಜನೆ ರೂಪಿಸಿಲ್ಲ. ಸರ್ಕಾರ ಬಂದು 9 ತಿಂಗಳಾಗಿದ್ದು ನೀರಾವರಿ ಯೋಜನೆಗಳ ನಿರ್ಲಕ್ಷ್ಯ ಮಾಡಿದೆ. ಹಳೆಯ ಯೋಜನೆಗೆ ಮತ್ತೆ ಚಾಲನೆ ನೀಡುತ್ತಿದ್ದಾರೆ. ಮುಖ್ಯಮಂತ್ರಿಗೆ ಅಧಿಕಾರಿಗಳು ದಾರಿ ತಪ್ಪಿಸುತ್ತಿದ್ದು, ಸಿಎಂ ಇದನ್ನು ಪರಿಶೀಲನೆ ಮಾಡಿ ಕ್ರಮ ವಹಿಸಬೇಕು ಎಂದು ಹೇಳಿದರು.

ಬೆಳಗಾವಿಗೆ ಇಂದು ಬಿಜೆಪಿ ರಾಷ್ಟ್ರೀಯ ‌ಅಧ್ಯಕ್ಷ ಜೆ.ಪಿ ನಡ್ಡಾ ಆಗಮನ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲೇ ಬಿಜೆಪಿ- ಜೆಡಿಎಸ್ ಮೈತ್ರಿಯ ಸೀಟು ಹಂಚಿಕೆ ಬಗ್ಗೆ ‌ಚರ್ಚೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬೆಳಗಾವಿಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ಆಗುವುದಿಲ್ಲ. ಎಲ್ಲವೂ ದೆಹಲಿಯಲ್ಲಿ ಆಗಲಿದೆ ಎಂದರು. ತಾವು ಹಾವೇರಿಯಿಂದ ಸ್ಪರ್ಧಿಸುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗಾಗಲೇ ಈ ಬಗ್ಗೆ ನನ್ನ ಅಭಿಪ್ರಾಯ ಹೇಳಿದ್ದೇನೆ ಎಂದು ಹೇಳಿದರು.

Comments (0)

Your email address will not be published. Required fields are marked *

Back to top button