ಬಳ್ಳಾರಿ: ಡಿಐಜಿಪಿ ಹುದ್ದೆಯಿಂದ ವರ್ಗಾವಣೆಗೊಂಡಿರುವ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ತಮ್ಮ ಉತ್ತರಾಧಿಕಾರಿಗೆ ಕಡತಗಳನ್ನು ಹಸ್ತಾಂತರಿಸದಂತೆ ಕೆಳಹಂತದ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಜನವರಿ 7ರಂದು ಬ್ಯಾನರ್ ಗಲಭೆ ಪ್ರಕರಣದ ಬಳಿಕ ಇವರನ್ನು ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆಯನ್ನು ಪ್ರಶ್ನಿಸಿ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ ಮೊರೆ ಹೋಗಿದ್ದು, ಯಾವುದೇ ಪ್ರಮುಖ ದಾಖಲೆಗಳನ್ನು ಹೊಸ ಅಧಿಕಾರಿಗೆ ನೀಡಬಾರದೆಂದು ವಾಟ್ಸಾಪ್ ಕರೆ ಮೂಲಕ ಸೂಚಿಸಿದ್ದಾರೆ ಎನ್ನಲಾಗಿದೆ.
ವರ್ಗಾವಣೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ, ಒಂದು ವೇಳೆ ಕಡತಗಳನ್ನು ನೀಡಿದರೆ ನಿಮ್ಮನ್ನು ಸಿಎಟಿ ಕೇಸ್ನಲ್ಲಿ ಪ್ರತಿವಾದಿಯನ್ನಾಗಿ ಮಾಡಲಾಗುವುದು ಎಂದು ವಲಯ ಆಡಳಿತಾಧಿಕಾರಿ ಬಸವರಾಜ್ ಅವರಿಗೆ ಬೆದರಿಕೆ ಹಾಕಿರುವ ವಿಡಿಯೋ ಹಾಗೂ ದಾಖಲೆಗಳು ಈಗ ವೈರಲ್ ಆಗಿವೆ. ವರ್ಗಾವಣೆಗೊಂಡ ನಂತರವೂ ಆಡಳಿತಾತ್ಮಕ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಪೊಲೀಸ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ವಲಯ ಆಡಳಿತಾಧಿಕಾರಿ ಬಸವರಾಜ್ , ವರ್ತಿಕಾ ಕಟಿಯಾರ್ ಅವರಿಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಮ್ಮ ಇಂತಹ ಮೌಖಿಕ ಸೂಚನೆಗಳು ಮತ್ತು ಬೆದರಿಕೆ ಕರೆಗಳು ನನ್ನ ಅಧಿಕೃತ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುತ್ತಿವೆ ಇನ್ನು ಮುಂದೆ ಇಂತಹ ಯಾವುದೇ ರೀತಿಯ ಕರೆ ಅಥವಾ ಪತ್ರಗಳ ಮೂಲಕ ಅಡಚಣೆ ಮಾಡದಂತೆ ಮನವಿ ಮಾಡಿದ್ದಾರೆ. ಹಿರಿಯ ಅಧಿಕಾರಿಯೊಬ್ಬರ ಈ ನಡೆಯು ರಾಜ್ಯದ ಆಡಳಿತ ವಲಯದಲ್ಲಿ ಸಂಚಲನ ಮೂಡಿಸಿದೆ.


