Thursday, February 12, 2026
23.7 C
Bengaluru
Google search engine
LIVE
ಮನೆ#Exclusive NewsTop Newsಹರಿಪ್ರಸಾದ್ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಫೋಟೋ ಅಸ್ತ್ರ..!?

ಹರಿಪ್ರಸಾದ್ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಫೋಟೋ ಅಸ್ತ್ರ..!?

ಕಾರವಾರ ಸಿದ್ದಾಪುರದಲ್ಲಿ ನಡೆದ ಕೊಲೆ ಪ್ರಕರಣವೊಂದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹಾಗೂ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ನಡುವೆ ತೀವ್ರ ಸ್ವರೂಪದ ಫೇಸ್‌ಬುಕ್ ವಾಗ್ವಾದ ನಡೆದಿದೆ. ಈ ಕೊಲೆ ಪ್ರಕರಣದ ಆರೋಪಿ ಜ್ಯೋತಿಷಿ ಕಮಲಾಕರ್ ಭಟ್‌ನನ್ನು ಬೆಳೆಸಿದ್ದೇ ಸುರೇಶ್ ಕುಮಾರ್ ಎಂದು ಆರೋಪಿಸಿದ್ದ ಬಿ.ಕೆ. ಹರಿಪ್ರಸಾದ್, ಈ ಕೃತ್ಯದ ನೈತಿಕ ಹೊಣೆಯನ್ನು ಶಾಸಕರೇ ಹೊರಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಯಾಗಿ ದೀರ್ಘ ಪೋಸ್ಟ್ ಮಾಡಿರುವ ಸುರೇಶ್ ಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ಆರೋಪಿ ಕಮಲಾಕರ್ ಭಟ್ ಜೊತೆಗೆ ವಿಮಾನದಲ್ಲಿ ಅಕ್ಕಪಕ್ಕ ಕುಳಿತು ಸೆಲ್ಫಿ ತೆಗೆಸಿಕೊಂಡಿರುವ ಫೋಟೋವನ್ನು ಪ್ರಕಟಿಸುವ ಮೂಲಕ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. ಆ ಫೋಟೋವನ್ನು ತೋರಿಸಿ, ಆರೋಪಿ ಜೊತೆ ಫೋಟೋ ಇರುವುದೇ ಅಪರಾಧವಾಗಿದ್ದರೆ ಈ ಕೊಲೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ದಾರೆಯೇ ಎಂದು ಪ್ರಶ್ನಿಸುವ ಮೂಲಕ ಹರಿಪ್ರಸಾದ್ ಅವರ ವಾದವನ್ನು ಅಣಕಿಸಿದ್ದಾರೆ.

ಹಳೆಯ ಕಾಲೇಜು ಗೆಳೆಯರ ನಡುವೆ ಶುರುವಾಯ್ತು ಸೋಷಿಯಲ್ ಮೀಡಿಯಾ ಯುದ್ಧ!

ಬಿ.ಕೆ. ಹರಿಪ್ರಸಾದ್ ಅವರ ಆರೋಪಗಳನ್ನು ಬೌದ್ಧಿಕ ದಿವಾಳಿತನ ಮತ್ತು ಪೂರ್ವಾಗ್ರಹ ಪೀಡಿತ ಮನಸ್ಥಿತಿ ಎಂದು ಕರೆದಿರುವ ಸುರೇಶ್ ಕುಮಾರ್, ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳನ್ನು ಸಾವಿರಾರು ಜನರು ಭೇಟಿಯಾಗಿ ಫೋಟೋ ತೆಗೆಸಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಬಹಳ ಹಿಂದೆ ಪೆಟ್ರೋಲ್ ಬಂಕ್‌ನಲ್ಲಿ ಒಮ್ಮೆ ಮಾತ್ರ ಆ ವ್ಯಕ್ತಿಯ ಪರಿಚಯವಾಗಿತ್ತು ಮತ್ತು ಈಗ ಆತ ಎದುರಿಗೆ ಸಿಕ್ಕರೂ ಗುರುತು ಹಿಡಿಯುವುದು ಅಸಾಧ್ಯ ಎಂದು ಅವರು ಹೇಳಿದ್ದಾರೆ. ಯಾರೋ ಒಬ್ಬ ಪರಿಚಯಸ್ಥರು ಎಸಗುವ ಕ್ರಿಮಿನಲ್ ಕೃತ್ಯಗಳಿಗೆ ಅಥವಾ ಅವರ ವೈಯಕ್ತಿಕ ಬದುಕಿನ ವಿಕೃತಿಗಳಿಗೆ ಒಬ್ಬ ಜನಪ್ರತಿನಿಧಿಯನ್ನು ಉತ್ತರದಾಯಿಯನ್ನಾಗಿ ಮಾಡುವುದು ಬಾಲಿಶವಾದದ್ದು ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ನಾಯಕರ ಆಪ್ತವಲಯದಲ್ಲಿ ಗುರುತಿಸಿಕೊಂಡು ಜೈಲು ಪಾಲಾದವರ ಉದಾಹರಣೆಗಳನ್ನು ನೀಡಿರುವ ಅವರು, ಆಗ ಕಾಂಗ್ರೆಸ್ ನಾಯಕರು ಅಂತಹ ಕೃತ್ಯಗಳ ನೈತಿಕ ಹೊಣೆ ಹೊತ್ತಿದ್ದಾರೆಯೇ ಎಂದು ಮರುಪ್ರಶ್ನೆ ಹಾಕಿದ್ದಾರೆ.

ಸಂವಿಧಾನದ ಆರ್ಟಿಕಲ್ 51A(h) ಅಡಿಯಲ್ಲಿ ವೈಜ್ಞಾನಿಕ ಮನೋಭಾವದ ಪಾಠ ಮಾಡಲು ಬಂದ ಹರಿಪ್ರಸಾದ್ ಅವರಿಗೆ ತಿರುಗೇಟು ನೀಡಿರುವ ಸುರೇಶ್ ಕುಮಾರ್, ಘಟನೆಗಳ ಸತ್ಯಾಸತ್ಯತೆ ಅರಿಯದೆ ರಾಜಕೀಯ ದ್ವೇಷಕ್ಕಾಗಿ ಆಧಾರರಹಿತ ಆರೋಪ ಮಾಡುವುದು ವೈಜ್ಞಾನಿಕ ಮನೋಭಾವವಲ್ಲ ಎಂದು ಲೇವಡಿ ಮಾಡಿದ್ದಾರೆ. ಕೊಲೆಗಾರ ಯಾರೇ ಆಗಿರಲಿ, ಆತ ಜ್ಯೋತಿಷಿಯಾಗಿರಲಿ ಅಥವಾ ರಾಜಕಾರಣಿಯಾಗಿರಲಿ ಅವನಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗಬೇಕು ಎಂಬುದೇ ನನ್ನ ನಿಲುವು ಎಂದು ಅವರು ಘೋಷಿಸಿದ್ದಾರೆ. ಶವದ ಮುಂದೆ ನಿಂತು ರಾಜಕೀಯ ಲಾಭ ಹುಡುಕುವ ಚಾಳಿ ಬಿಟ್ಟು ಘನತೆಯುತ ರಾಜಕಾರಣ ಮಾಡಿ ಎಂದು ಹರಿಪ್ರಸಾದ್ ಅವರಿಗೆ ಸಲಹೆ ನೀಡಿರುವ ಅವರು, ತಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದಿದವರು ಎಂಬುದನ್ನು ನೆನಪಿಸಿಕೊಳ್ಳಲು ಕೂಡ ಇಂದು ಬೇಸರವಾಗುತ್ತದೆ ಎಂದು ತಮ್ಮ ಪೋಸ್ಟ್‌ನಲ್ಲಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments