
ಬೆಂಗಳೂರು: ನಿವಾಸಿಗಳಿಗೆ ಬೆಸ್ಕಾಂ ಮಹತ್ವದ ಸೂಚನೆಯೊಂದನ್ನು ನೀಡಿದ್ದು, ನಗರದ ಹೆಬ್ಬಾಳ ಮತ್ತು ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಳೆಯಿಂದ ಸತತ ಐದು ದಿನಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಫೆಬ್ರವರಿ 4ರ ಮುಂಜಾನೆ 6:00 ಗಂಟೆಯಿಂದ ಆರಂಭವಾಗಲಿರುವ ಈ ಪವರ್ ಕಟ್, ಫೆಬ್ರವರಿ 9ರ ರಾತ್ರಿ 10:00 ಗಂಟೆಯವರೆಗೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದೀರ್ಘಾವಧಿಯ ವಿದ್ಯುತ್ ವ್ಯತ್ಯಯಕ್ಕೆ ಪ್ರಮುಖ ಕಾರಣವೆಂದರೆ 66/11 ಕೆ.ವಿ ಹೆಚ್.ಬಿ.ಆರ್ ಸ್ಟೇಷನ್ನಲ್ಲಿ ಹಮ್ಮಿಕೊಳ್ಳಲಾಗಿರುವ ತುರ್ತು ನಿರ್ವಹಣಾ ಕಾಮಗಾರಿಗಳು. ವಿದ್ಯುತ್ ಜಾಲದ ಸುಧಾರಣೆ ಮತ್ತು ತಾಂತ್ರಿಕ ದೋಷಗಳನ್ನು ಸರಿಪಡಿಸುವ ಉದ್ದೇಶದಿಂದ ಬೆಸ್ಕಾಂ ಈ ಕ್ರಮಕ್ಕೆ ಮುಂದಾಗಿದ್ದು, ಕಾಮಗಾರಿ ನಡೆಯುವ ಅವಧಿಯಲ್ಲಿ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ.
ವಿದ್ಯುತ್ ಕಡಿತದಿಂದಾಗಿ ನಗರದ ಹಲವಾರು ಪ್ರಮುಖ ಬಡಾವಣೆಗಳ ಮೇಲೆ ಪರಿಣಾಮ ಬೀರಲಿದೆ. ವಿಶೇಷವಾಗಿ ದಿವ್ಯ ಶಾಂತಿ, ಗೋವಿಂದಪುರ, ಕಾರ್ಲೆ, ಬೃಂದಾವನ ನಗರ, ಟೈಟನ್ ಗ್ಯಾರೇಜ್ ಮತ್ತು ಗಾಂಧಿನಗರದ ನಿವಾಸಿಗಳು ಪವರ್ ಪ್ರಾಬ್ಲಂ ಎದುರಿಸಲಿದ್ದಾರೆ. ಇದರೊಂದಿಗೆ ಭೈರವೀ ಅಪಾರ್ಟ್ಮೆಂಟ್ಸ್, ಹೆಗ್ಗಡೆ ನಗರ, ಚಂದ್ರಿಕಾ ಸೋಪ್ ಫ್ಯಾಕ್ಟರಿ ಹಾಗೂ ಬಿಎಂಟಿಸಿ ಡಿಪೋ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ಪೂರೈಕೆ ಇರುವುದಿಲ್ಲ.
ಹೆಬ್ಬಾಳದ ಹತ್ತಿರದ ಇತರ ಪ್ರದೇಶಗಳಾದ ಕಾವಲ್ಬೈರಸಂದ್ರ, ಎಲ್.ಆರ್. ಬಂಡೆ ಮುಖ್ಯ ರಸ್ತೆ, ಚಿನ್ನಣ್ಣ ಲೇಔಟ್, ಅಂಬೇಡ್ಕರ್ ಲೇಔಟ್ ಮತ್ತು ಅನ್ವರ್ ಲೇಔಟ್ಗಳಲ್ಲಿಯೂ ವ್ಯತ್ಯಯ ಉಂಟಾಗಲಿದೆ. ಅಲ್ಲದೆ ಕಾವೇರಿ ನಗರ, ಅಂಬೇಡ್ಕರ್ ವೈದ್ಯಕೀಯ ಕಾಲೇಜು ಆವರಣ, ಸುಲ್ತಾನ್ ಪಾಳ್ಯ, ರಂಕಾ ನಗರ, ಕನಕ ನಗರ ಹಾಗೂ ಕೆಎಚ್ಬಿ ಮುಖ್ಯ ರಸ್ತೆಯ ನಿವಾಸಿಗಳಿಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಐದು ದಿನಗಳ ಕಾಲ ವಿದ್ಯುತ್ ವ್ಯತ್ಯಯವಿರುವುದರಿಂದ, ಈ ಭಾಗದ ಜನರು ನೀರಿನ ಶೇಖರಣೆ ಮತ್ತು ಇತರೆ ಅಗತ್ಯ ಕೆಲಸಗಳನ್ನು ಮೊದಲೇ ಯೋಜಿಸಿಕೊಳ್ಳುವುದು ಒಳಿತು. ಸಾರ್ವಜನಿಕರು ಈ ತಾಂತ್ರಿಕ ಅಡಚಣೆಯನ್ನು ಗಮನಿಸಿ ಬೆಸ್ಕಾಂನೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ.




