ನಟ ಕಮಲ್ ಹಾಸನ್ ನಟಿಸಿರುವ ಥಗ್ ಲೈಫ್ ಚಿತ್ರ ಬಿಡುಗಡೆಗೆ ಪೊಲೀಸ್ ರಕ್ಷಣೆ ಕೋರಿರುವುದಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ ಹೇಳಿಕೆ ನೀಡಲು ನಟ ಕಮಲ್ ಹಾಸನ್ ಅವರೇನು ಭಾಷಾ ತಜ್ಞರೇ? ಅಥವಾ ಇತಿಹಾಸಕಾರರೇ? ಎಂದು ಚಾಟಿ ಬೀಸಿದೆ.
ರಾಜ್ಕಮಲ್ ಫಿಲ್ಮ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಕಮಲ್ ಹಾಸನ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ವಿವಾದ ಸೃಷ್ಟಿಯಾದ ನಂತರ ಕಮಲ್ ಹಾಸನ್ ಬರೆದಿರುವ ಪ್ರತಿಕ್ರಿಯೆಯಲ್ಲಿ ಕ್ಷಮೆ ಕೋರಿದ್ದರೆ ಅದನ್ನು ಒಪ್ಪಿಕೊಳ್ಳಲಾಗ್ತಿತ್ತು. ಆದ್ರೆ, ಕಮಲ್ ಹಾಸನ್ ಹೇಳಿಕೆಯಲ್ಲಿ ಯಾವುದೇ ಕ್ಷಮೆ ಇಲ್ಲ. ನೀವು ಕಮಲ್ ಹಾಸನ್ ಅಥವಾ ಬೇರೆ ಯಾರೇ ಆಗಿರಬಹುದು. ಜನರ ಭಾವನೆಗಳನ್ನು ನೀವು ನೋವುಂಟು ಮಾಡಲಾಗದು. ಭಾಷೆಯ ಆಧಾರದಲ್ಲಿ ರಾಜ್ಯಗಳನ್ನು ವಿಂಗಡಿಸಲಾಗಿದೆ. ಸಾರ್ವಜನಿಕ ವ್ಯಕ್ತಿತ್ವ ಹೊಂದಿರುವ ಕಮಲ್ ಹಾಸನ್ ಅವರು ಅಂಥ ಹೇಳಿಕೆ ನೀಡಲಾಗದು. ಇದರಿಂದ ಅಶಾಂತಿ ಮತ್ತು ಕ್ಷೋಭೆ ಉಂಟಾಗಿದೆ. ಕರ್ನಾಟಕದ ಜನರು ಕ್ಷಮೆ ಕೋರಲು ಕೇಳಿದ್ದಾರೆ ಅಷ್ಟೆ. ಈಗ ಕಮಲ್ ಅವರು ರಕ್ಷಣೆ ಕೋರಿ ನ್ಯಾಯಾಲಯದ ಮುಂದೆ ಬಂದಿದ್ದಾರೆ. ಯಾವ ಆಧಾರದಲ್ಲಿ ಕಮಲ್ ಹೇಳಿಕೆ ನೀಡಿದ್ದಾರೆ? ಅವರು ಭಾಷಾ ತಜ್ಞರೇ ಅಥವಾ ಇತಿಹಾಸಕಾರರೇ? ಯಾವ ಆಧಾರದ ಮೇಲೆ ಅವರು ಮಾತನಾಡುತ್ತಿದ್ದಾರೆ? 1950ರಲ್ಲಿ ರಾಜಗೋಪಾಲಚಾರಿಯವರು ಇಂಥದ್ಧೇ ಹೇಳಿಕೆ ನೀಡಿ, ಆನಂತರ ಬಹಿರಂಗವಾಗಿ ಕ್ಷಮೆ ಕೋರಿದ್ದರು. ಈಗ ಸಿನಿಮಾ ಬಿಡುಗಡೆಗೆ ಕಮಲ್ ನಿರ್ಮಾಣ ಸಂಸ್ಥೆ ರಕ್ಷಣೆ ಕೋರುತ್ತಿದ್ದಾರೆ. ಕ್ಷಮೆ ಕೇಳಿದ್ದರೆ ಇದು ಇರುತ್ತಲೇ ಇರಲಿಲ್ಲ
ಎಂದು ಅಭಿಪ್ರಾಯಪಟ್ಟಿತು.
ಶೌರ್ಯದ ಮಹತ್ವ ಅಡಕವಾಗಿರುವುದು ವಿವೇಚನೆಯಲ್ಲಿ…
ಮಣಿ ರತ್ನಂ ಮಾಡಿರುವ ಸಿನಿಮಾದ ಮಹತ್ವದ ಬಗ್ಗೆ ಕಮಲ್ಗೆ ತಿಳಿದಿದೆ. ಆದರೆ, ಕ್ಷಮೆ ವಿಚಾರದಲ್ಲಿ ಕಮಲ್ ಯಾವುದೇ ಹೇಳಿಕೆ ನೀಡುವುದಿಲ್ಲ. ಕಮಲ್ ಹಾಸನ್ ಸೃಷ್ಟಿಸಿರುವ ಸಮಸ್ಯೆಗೆ ಪೊಲೀಸರು ರಕ್ಷಣೆ ನೀಡಬೇಕೆ? ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಕರ್ನಾಟಕದಲ್ಲಿ ಸಂಪಾದನೆ ಮಾಡಬೇಕೆಂದಾದರೆ ಕ್ಷಮೆ ಕೋರಬೇಕು. ಕಮಲ್ ಹೇಳಿಕೆ ನೀಡಿರುವುದರಿಂದ ಅವರೇ ಅದನ್ನು ಹಿಂಪಡೆಯಬೇಕು. ಆ ಹೇಳಿಕೆಗೆ ಬದ್ಧವಾಗಿದ್ದಾರೆಯೇ? ಎಂದು ಹೈಕೋರ್ಟ್ ಪ್ರಶ್ನಿಸಿತು.
ಶೌರ್ಯದ ಮಹತ್ವ ಅಡಕವಾಗಿರುವುದು ವಿವೇಚನೆಯಲ್ಲಿ… ಭಾವನೆಯನ್ನು ನಗಣ್ಯವಾಗಿ ಪರಿಗಣಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು
ರಾಜಕಮಲ್ ಸಂಸ್ಥೆಯ ವಾದ ಏನು?
ಕಮಲ್ ಹಾಸನ್ ಅವರು ನೀಡಿರುವ ಹೇಳಿಕೆಯನ್ನು ಆಧರಿಸಿ ಥಗ್ ಲೈಫ್ ಚಿತ್ರದ ಬಿಡುಗಡೆಗೆ ನಿಷೇಧ ವಿಧಿಸಲಾಗಿದೆ. ಇಡೀ ಹೇಳಿಕೆಯನ್ನು ನಾನು ನೋಡಿದ್ದೇನೆ. ಕನ್ನಡ ಚಿತ್ರರಂಗದ ಸೂಪರ್ಸ್ಟಾರ್ ಶಿವರಾಜ್ ಕುಮಾರ್ ಅವರು ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಮಲ್ ನೀಡಿರುವ ಹೇಳಿಕೆಯನ್ನು ವ್ಯಾಪ್ತಿ ಮೀರಿ ಅರ್ಥೈಸಿಕೊಂಡು ಅವರು ಕನ್ನಡದ ವಿರುದ್ಧ ಏನೋ ಹೇಳಿದ್ದಾರೆ ಎಂದು ಹೇಳುವುದು ಸರಿಯಲ್ಲ. ಹೇಳಿಕೆ ನೀಡಿದ ನಂತರ ಕಮಲ್ ಹಾಸನ್ ಸ್ಪಷ್ಟನೆ ನೀಡಿದ್ದಾರೆ. ಕಮಲ್ ಯಾವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ನೋಡಬೇಕು
ಎಂದು ರಾಜಕಮಲ್ ಸಂಸ್ಥೆ ಪ್ರತಿನಿಧಿಸಿದ್ದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿದ್ರು.