ತಾಯಿ ಅಗಲಿಕೆಯ ನೋವಿನಲ್ಲಿರುವ ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಾಂತ್ವಾನ ಹೇಳಿದ್ದಾರೆ.
ಬೈರತಿ ಸುರೇಶ್ ಅವರ ನಿವಾಸಕ್ಕೆ ತೆರಳಿದ ಡಿಕೆ ಶಿವಕುಮಾರ್, ನಗರಾಭಿವೃದ್ಧಿ ಸಚಿವರು ಮತ್ತು ಅವರ ಕುಟುಂಬಸ್ಥರಿಗೆ ಧೈರ್ಯ ಹೇಳುವ ಕೆಲಸ ಮಾಡಿದರು.
ಕಳೆದ ಶನಿವಾರ ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರ ತಾಯಿ ಸುಶೀಲಮ್ಮ ರವರು ನಿಧನರಾಗಿದ್ದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಎಲ್ಲರ ನೆಚ್ಚಿನ ಅಮ್ಮ ಎಂದೇ ಪರಿಚಿತರಾಗಿದ್ದ ಸುಶೀಲಮ್ಮ ಅವರು ಪುತ್ರ ಸಚಿವ ಬೈರತಿ ಸುರೇಶ್ ಮತ್ತು ಪುತ್ರಿ ಬಿ.ಎಸ್.ರಮಾದೇವಿ, ಮೊಮ್ಮಕ್ಕಳು ಹಾಗೂ ಅಸಂಖ್ಯಾತ ಅಭಿಮಾನಿ ಬಳಗವನ್ನು ಅಗಲಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶನಿವಾರ ಮೃತರ ಅಂತಿಮ ದರ್ಶನ ಪಡೆದು, ಬೈರತಿ ಸುರೇಶ್ ಅವರಿಗೆ ಸಾಂತ್ವನ ಹೇಳಿದ್ದರು