ಬೆಂಗಳೂರು : ಬೆಂಗಳೂರು ದಕ್ಷಿಣ ಎಸಿ ಕಚೇರಿಯಲ್ಲಿ ಹಾಡಹಾಗಲೇ ಲಂಚ ಪಡೆಯುತ್ತಿದ್ದ ಇಬ್ಬರನ್ನು ಲೋಕಾಯುಕ್ತ ಪೊಲೀಸರು ದಸ್ತಗಿರಿ ಮಾಡಿದ್ದು, ಪ್ರಕರಣ ಗಂಭೀರ ರೂಪ ಪಡೆದಿದೆ.
ಬೆಂಗಳೂರು ದಕ್ಷಿಣ ಎಸಿ ಕಚೇರಿಯಲ್ಲಿ ಕೇಸ್ ವರ್ಕರ್ ಆಗಿದ್ದ ಬಾಲಕೃಷ್ಣ ಹಾಗೂ ಕಂಪ್ಯೂಟರ್ ಆಪರೇಟರ್ ಸೋಮಶೇಖರ್ ಅರೆಸ್ಟ್ ಆದವರು. ರೈತರೊಬ್ಬರ ಜಮೀನಿನ ಖಾತೆ ಬದಲಾವಣೆಗೆ ಇವರು ಒಂದು ಲಕ್ಷದ ಇಪ್ಪತ್ತು ಸಾವಿರ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಇವರು ಮೇಲಾಧಿಕಾರಿಗಳ ಹೆಸರು ಹೇಳಿ ಪ್ರತಿನಿತ್ಯ ಕಡತ ವಿಲೇವಾರಿಗೆ ಮುಂಚೆ ಹಣ ವಸೂಲು ಮಾಡುತ್ತಿದ್ದರು ಎಂಬ ದೂರುಗಳಿದ್ದವು. ರೈತರು ಒಬ್ಬರ ಜಮೀನಿನ ಖಾತೆ ಬದಲಾವಣೆ ಕಡತಕ್ಕೆ ಮಂಜೂರಿ ಕೊಡಿಸಲು ಹಣ ಪಡೆದ ಇವರಿಬ್ಬರೂ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇಬ್ಬರು ಭ್ರಷ್ಟರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಎಸಿ ಕಚೇರಿಯಿಂದ ಕ್ಲಿಯರ್ ಆಗಬೇಕಿದ್ದ ಕಡತವನ್ನು ಕ್ಲಿಯರ್ ಮಾಡಿಸಿಕೊಡಲು ಈ ಇಬ್ಬರಷ್ಟೇ ಲಂಚ ಪಡೆಯುತ್ತಿದ್ದರಾ ಅಥವಾ ಮೇಲಾಧಿಕಾರಿಗಳ ಪರವಾಗಿ ಲಂಚ ಪಡೆಯುತ್ತಿದ್ದರಾ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ.
ಈ ಹಿಂದೆ ಇದೇ ಕಂದಾಯ ಭವನದ ಆವರಣದಲ್ಲಿರುವ ಡಿಸಿ ಕಚೇರಿಯ ಮೇಲೆ ಎಸಿಬಿ ರೇಡ್ ನಡೆದಿತ್ತು. ಈ ವೇಳೆ ಕೇಸ್ ವರ್ಕರ್ ಮಹೇಶ್ ಎಂಬಾತ 5 ಲಕ್ಷ ಹಣ ಪಡೆದು ಟ್ರ್ಯಾಪ್ ಆಗಿದ್ದ. ಈ ಪ್ರಕರಣದಲ್ಲಿ ಆಗಿನ ಡಿಸಿ ಮಂಜುನಾಥ್ ಮೇಲು ಪ್ರಕರಣ ದಾಖಲಾಗಿ ಅವರು ಜೈಲು ಪಾಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಂದಾಯ ಭವನದಲ್ಲಿ ಬರೀ ಬ್ರೋಕರ್ ಗಳ ಕೆಲಸಗಳಷ್ಟೇ ಆಗುತ್ತವೆ. ಅಧಿಕಾರಿಗಳು ಬ್ರೋಕರ್ ಗಳನ್ನು ಇಟ್ಟುಕೊಂಡು ಹಾಗೂ ಕೆಳಹಂತದ ಇಂತಹ ನೌಕರರನ್ನು ಬ್ರೋಕರ್ ಮಾದರಿಯಲ್ಲಿ ಬಳಸಿಕೊಂಡು ಅವರ ಮೂಲಕ ಪ್ರತಿನಿತ್ಯ ಲಂಚ ವಸ್ತು ಮಾಡುವ ಪರಿಪಾಠವಿದೆ. ಹಲವು ಬಾರಿ ಎಸಿಬಿ ರೇಡ್ ಗಳು ನಡೆದಿವೆ.
ಲೋಕಾಯುಕ್ತರು ಆಗಾಗ್ಗೆ ವಿಸಿಟ್ ಮಾಡಿ ಜನರ ಸಮಸ್ಯೆ ಆಲಿಸುತ್ತಿದ್ದಾರೆ. ಆದರೆ ಈ ಭ್ರಷ್ಟರು ರಂಗೋಲಿ ಕೆಳಗೆ ತೂರಿ ನೌಕರರನ್ನೇ ತಮ್ಮ ಏಜೆಂಟ್ ಗಳಂತೆ ಬಳಸಿಕೊಂಡು ಅವ್ಯಾಹತವಾಗಿ ಲಂಚಾವತಾರ ಮೆರೆಯುತ್ತಿದ್ದಾರೆ. ಜೊತೆಗೆ ಸರ್ಕಾರಿ ಕಚೇರಿ ಅಲ್ಲದೆ ” ಹೋಮ್ ಆಫೀಸ್” ಗಳನ್ನು ಮಾಡಿಕೊಂಡು ಅಲ್ಲಿ ಬ್ರೋಕರ್ ಗಳನ್ನು ಕೂರಿಸಿಕೊಂಡು ಕಡತಗಳನ್ನು ತಮ್ಮ ಖಾಸಗಿ ಕಚೇರಿಗಳಿಗೆ ಕೊಂಡೊಯ್ದು ಹಣ ಪಡೆದು ವಿಲೇವಾರಿ ಮಾಡುತ್ತಾರೆ. ಬಹು ಕೋಟಿ ಬೆಲೆಬಾಳುವ ಸರ್ಕಾರಿ ಜಮೀನುಗಳನ್ನು ರಿಯಲ್ ಎಸ್ಟೇಟ್ ಕುಳಗಳಿಗೆ ಪರಭಾರೆ ಮಾಡುವ ಹಲವು ಪ್ರಕರಣಗಳು ಎದುರಿವೆ. ಸರ್ಕಾರ ಕಂದಾಯ ಭವನವನ್ನು ಸಮಗ್ರವಾಗಿ ಶುದ್ಧೀಕರಿಸಲು ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.