#Exclusive NewsTop Newsರಾಜ್ಯಸುದ್ದಿ

ಡೆತ್​ ನೋಟಲ್ಲಿ ಪ್ರಿಯಾಂಕ್​ ಖರ್ಗೆ ಬಗ್ಗೆ ಉಲ್ಲೇಖ..?

ಬೆಂಗಳೂರು: ಬೀದರ್ ಮೂಲದ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಸಂಬಂಧ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಖಡಾಖಂಡಿತವಾಗಿ ಸೋಮವಾರ ಹೇಳಿದ್ದರು. ಅಷ್ಟೇ ಅಲ್ಲದೆ, ರಾಜು ಕಪನೂರ್ (ಗುತ್ತಿಗೆದಾರನಿಗೆ ಹಣಕ್ಕಾಗಿ ಬೆದರಿಕೆ ಹಾಕಿದ್ದ ಆರೋಪ ಎದುರಿಸುತ್ತಿರುವ ವ್ಯಕ್ತಿ) ಜೊತೆಗೆ ಈ ಹಿಂದೆ ಬಿಜೆಪಿಯವರಿಗೂ ನಂಟಿತ್ತು ಎಂದಿದ್ದರು. ಆದರೆ, ಗುತ್ತಿಗೆದಾರ ಸಚಿನ್ ಪಂಚಾಳ್ ಡೆತ್ ನೋಟ್​​​ನಲ್ಲಿ ಬರೆದಿಟ್ಟಿದ್ದ ವಿಷಯ ಮಾತ್ರ, ಟೆಂಡ್ ವಿಚಾರದಲ್ಲಿ ಖರ್ಗೆ ಅವರಿಗೂ ಲಿಂಕ್ ಇದೆ ಎಂಬುದನ್ನು ಬಹಿರಂಗಪಡಿಸಿದೆ.

ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್​​ನೋಟ್​​ನಲ್ಲಿ ರಾಜು ಕಪನೂರ್ ಹಾಗೂ ಗ್ಯಾಂಗ್​​ ಹೆಸರುಗಳನ್ನು ಉಲ್ಲೇಖಿಸಿದ್ದ ಸಚಿನ್ ಪಾಂಚಾಳ್, ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಮೇರೆಗೆ ರಾಜು ಕಪನೂರ್ ಜತೆ ಮಾತುಕತೆ ನಡೆಸಿದ್ದಾಗಿಯೂ ಉಲ್ಲೇಖಿಸಿದ್ದಾರೆ. ಜತೆಗೆ, ಪ್ರಿಯಾಂಕ್ ಖರ್ಗೆ ದೂರವಾಣಿ ಮೂಲಕ ಕರೆ ಮಾಡಿ ಬೇರೊಬ್ಬ ಗುತ್ತಿಗೆದಾರನಿಗೆ ಟೆಂಡ್ ನೀಡುವಂತೆ ಸೂಚನೆ ನೀಡಿದ್ದನ್ನೂ ಉಲ್ಲೇಖಿಸಿದ್ದಾರೆ.

ಡೆತ್​​ನೋಟ್​ನಲ್ಲಿರುವ ಅಸಲಿ ವಿಚಾರವೇನು?

ತಮ್ಮ ಸಾವಿಗೆ ರಾಜು ಕಪನೂರ್ ಮತ್ತು ಗ್ಯಾಂಗ್ ಕಾರಣ ಎಂದು ಉಲ್ಲೇಖಿಸಿರುವ ಸಚಿನ್ ಪಂಚಾಳ್, ಮುಂದುವರಿದು ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ತಾವು ಸುಮಾರು ಎರಡು ವರ್ಷಗಳಿಂದ ಪ್ರಾಜೆಕ್ಟ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಕಂಪನಿಯ ಎಂಡಿ ಮೂಲಕ ರಾಜು ಕಪನೂರ್ ಪರಿಚಯವಾಗಿತ್ತು ಎಂದು ಸಚಿನ್ ಉಲ್ಲೇಖಿಸಿದ್ದಾರೆ.

ಸುಮಾರು 12 ಕೋಟಿ ರೂಪಾಯಿಯ ಒಂದು ಟೆಂಡರ್ ಕರೆಯಲಾಗುತ್ತಿದ್ದು, ಅದನ್ನು ನಿಮಗೆ ಮಾಡಿಸಿ ಕೊಡುತ್ತೇನೆ ಎಂದು ರಾಜು ಕಪನೂರ್ ಭರವಸೆ ನೀಡಿದ್ದ. ಈ ಟೆಂಡರ್ ಮಾಡಿಕೊಡಬೇಕಿದ್ದರೆ ಶೇಕಡ 5ರಷ್ಟು ಕಮಿಷನ್ ನೀಡಬೇಕು. ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ಮಾತನ್ನು ದಾಟುವುದಿಲ್ಲ ಎಂದು ಹೇಳಿದ್ದ. ಸುಮಾರು ಐದಾರು ಬಾರಿ ನಾವಿಬ್ಬರೂ ಜೊತೆಯಾಗಿ ಬೆಂಗಳೂರಿಗೆ ಹೋಗಿ ಮಾನ್ಯ ಸಚಿವರನ್ನು ಭೇಟಿಯಾಗಿ ಬಂದಿರುತ್ತೇವೆ. ಆದರೂ ಸಚಿವರು ಮೊಬೈಲ್ ಫೋನ್ ಮೂಲಕ ಕರೆ ಮಾಡಿ, ಸಿಇ ಇಜಾಜ್ ಹುಸೇನ್ ಅವರಿಗೆ ಮಾಡಿಕೊಡು ಎಂದು ಹೇಳಿರುತ್ತಾರೆ. ಆದರೂ ಈ ಟೆಂಡರ್ ಗೆ 5% ಕಮಿಷನ್ ಎಂದರೆ, 60 ಲಕ್ಷ ರೂಪಾಯಿ ಆಗುತ್ತದೆ. ಇದಕ್ಕೆ ಕಪನೂರ್ ಬೇಡಿಕೆ ಇಟ್ಟಿದ್ದ.10 ಲಕ್ಷ ರೂಪಾಯಿ ಮುಂಗಡ ಹಣವನ್ನು ಆತನಿಗೆ ನೀಡಿದ್ದೆವು. ಬಳಿಕ ಆತ 15 ಕೋಟಿ ರೂಪಾಯಿ ಮೊತ್ತದ ಬೇರೆ ಟೆಂಡರ್ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದ ಎಂದು ಸಚಿನ್ ಪಂಚಾಳ್ ಡೆತ್​ನೋಟ್​​ನಲ್ಲಿ ಉಲ್ಲೇಖಿಸಿದ್ದರು.

 

Comments (0)

Your email address will not be published. Required fields are marked *

Back to top button