ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳುತ್ತಿರುವ ಶಿವಣ್ಣನ ಭೇಟಿಯಾಗಿ ಶುಭ ಹಾರೈಸಿದ ಗಣ್ಯರು

ಶಿವರಾಜ್ ಕುಮಾರ್ ಅವರಿಗೆ ಅನಾರೋಗ್ಯ ಉಂಟಾಗಿದ್ದು ಪ್ರಮುಖ ಶಸ್ತ್ರಚಿಕಿತ್ಸೆಯೊಂದಕ್ಕಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಇಂದು ಶಿವಣ್ಣ ತೆರಳಲಿದ್ದು, ಸುದೀಪ್ ಸೇರಿದಂತೆ ಹಲವು ಗಣ್ಯರು ಶಿವಣ್ಣನ ಭೇಟಿಯಾಗಿ ಶುಭ ಹಾರೈಸಿದ್ದಾರೆ.
ಕಿಚ್ಚ ಸುದೀಪ್ ಅವರು ಶಿವಣ್ಣ ಅವರ ನಿವಾಸಕ್ಕೆ ತೆರಳಿ ಅವರಿಗೆ ಶುಭ ಹಾರೈಸಿದ್ದಾರೆ. ಧೈರ್ಯ ತುಂಬವ ಕಾರ್ಯ ಮಾಡಿದ್ದಾರೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಹಲವು ವರ್ಷಗಳಿಂದ ಅಣ್ಣ ತಮ್ಮಂದಿರಂತೆ ಇದ್ದಾರೆ.

ಮಾಜಿ ಸಚಿವ, ನಟ ಬಿಸಿ ಪಾಟೀಲ್ ಸಹ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಹೂಗುಚ್ಛ ನೀಡಿ ಶೀಘ್ರ ಗುಣಮುಖವಾಗಿ ಮರಳುವಂತೆ ಶುಭ ಹಾರೈಸಿದ್ದಾರೆ.

ಸಚಿವ ಮಧು ಬಂಗಾರಪ್ಪ ಅವರು ಸಹ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಶುಭ ಹಾರೈಸಿದ್ದಾರೆ. ಮಧು ಬಂಗಾರಪ್ಪ ಅವರು ಶಿವಣ್ಣ ಅವರ ಆಪ್ತ ಸಂಬಂಧಿ. ಗೀತಾ ಶಿವರಾಜ್ ಕುಮಾರ್ ಅವರ ಸಹೋದರ ಸಹ.

ನಟ ವಿನೋದ್ ರಾಜ್ ಕುಮಾರ್ ಅವರು ಸಹ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ತೆರಳಿ ಅವರೊಟ್ಟಿಗೆ ಕೆಲ ಸಮಯ ಕಳೆದಿದ್ದಾರೆ. ಹಳೆಯ ಗೆಳೆಯರಾದ ಇಬ್ಬರೂ ತುಸು ಸಮಯ ಹರಟೆ ಹೊಡೆದಿದ್ದಾರೆ. ವಿನೋದ್ ತಮ್ಮ ತೋಟದಿಂದ ಹಣ್ಣು-ತರಕಾರಿಗಳನ್ನು ಶಿವಣ್ಣನಿಗೆ ನೀಡಿದ್ದಾರೆ.

ಶಿವರಾಜ್ ಕುಮಾರ್ ಅವರಿಗೆ ಅನಾರೋಗ್ಯ ಉಂಟಾಗಿದ್ದು, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅಮೆರಿಕಕ್ಕೆ ಹೋಗುತ್ತಿದ್ದಾರೆ. ಇಂದು ರಾತ್ರಿ 8:30ಗೆ ಶಿವಣ್ಣ ತೆರಳಲಿದ್ದು, ಅವರೊಟ್ಟಿಗೆ ಪತ್ನಿ ಗೀತಾ ಮತ್ತು ಮಗಳು ನಿವೇದಿತಾ ಸಹ ತೆರಳುವ ಸಾಧ್ಯತೆ ಇದೆ.




