ಬೆಂಗಳೂರು: ಅಲ್ಪಸಂಖ್ಯಾತರ ಪರವಾಗಿ ಮತ್ತೊಂದು ನಿರ್ಣಯವನ್ನ ರಾಜ್ಯ ಸರ್ಕಾರ ಕೈಗೊಂಡಿದೆ. ಕರ್ನಾಟಕ ಶಿಕ್ಷಣ ಸಂಸ್ಥೆಗಳ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ಇರುವ ನಿಬಂಧನೆ ಮತ್ತು ಷರತ್ತುಗಳನ್ನು ಸಡಿಲಿಸಿದೆ.
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ಈ ಮೊದಲು ಶೇ.50 ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕಡ್ಡಾಯವಾಗಿ ಇರಲೇಬೇಕು ಎಂಬ ನಿಯಮ ಇತ್ತು. ಈ ನಿಯಮವನ್ನು ಶೇಕಡಾ 50ರಿಂದ ಶೇ.25ಕ್ಕೆ ಇಳಿಸುವ ಬಗ್ಗೆ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆದಿತ್ತು. ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಸಿದ್ದರಾಮಯ್ಯ ಸಂಪುಟ ಈ ನಿಯಮವನ್ನು ಸಂಪೂರ್ಣವಾಗಿ ಸಡಿಲಿಸಿದೆ.ಅಲ್ಪಸಂಖ್ಯಾತರ ಸ್ಥಾನಮಾನ ಪಡೆಯಲು ಅಲ್ಪಸಂಖ್ಯಾತ ಸಮುದಾಯದ ಶೇಕಡಾ 50ರಷ್ಟು ವಿದ್ಯಾರ್ಥಿಗಳನ್ನು ಸೇರಿಸುವುದು ಸೇರಿದಂತೆ ಕೆಲವು ನಿಯಮಗಳಿಂದ ಧಾರ್ಮಿಕ ಅಲ್ಪಸಂಖ್ಯಾತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮುಕ್ತಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ರಾಜ್ಯದ ಅಲ್ಪಸಂಖ್ಯಾತರಲ್ಲಿ ಮುಸಲ್ಮಾನರು, ಕ್ರೈಸ್ತರು, ಸಿಖ್ಖರು, ಜೈನರು, ಬೌದ್ಧ ಮತ್ತು ಪಾರ್ಸಿ ಸಮುದಾಯಗಳ ಜನಸಂಖ್ಯೆಯು ಕಡಿಮೆ ಇರುವುದರಿಂದ, ಈ ಸಮುದಾಯಗಳಿಂದ ಶೇಕಡಾ 50ರಷ್ಟು ವಿದ್ಯಾರ್ಥಿಗಳನ್ನು ಹೊಂದಲು ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಅವರು ನಡೆಸುವ ಸಂಸ್ಥೆಗಳಲ್ಲಿ ಕಷ್ಟವಾಗುತ್ತದೆ ಎಂದು ಸಚಿವ ಸಂಪುಟ ಗಮನಿಸಿ ಅಸ್ತಿತ್ವದಲ್ಲಿರುವ ನಿಯಮಗಳಿಗೆ ತಿದ್ದುಪಡಿಯನ್ನು ಸಮರ್ಥಿಸಿದೆ.
ಜುಲೈ 2025 ರಿಂದ ನಾಲ್ಕು ವರ್ಷಗಳ ಕಾಲ ವಿಶ್ವಬ್ಯಾಂಕ್ನಿಂದ 1,750 ಕೋಟಿ ಮತ್ತು ರಾಜ್ಯ ಸರ್ಕಾರದಿಂದ 750 ಕೋಟಿ ಸೇರಿದಂತೆ 2,500 ಕೋಟಿ ರೂಪಾಯಿ ಬಾಹ್ಯ ಅನುದಾನದೊಂದಿಗೆ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಲು ಸಂಪುಟ ನಿರ್ಧರಿಸಿದೆ. ಇದು ಪ್ರಾಥಮಿಕ ಯೋಜನಾ ವರದಿಯನ್ನು ಸಲ್ಲಿಸಲಿದೆ. ಬಾಹ್ಯ ಅನುದಾನಗಳಿಗೆ ಅನುಮೋದನೆಗಾಗಿ ಕೇಂದ್ರದ ಆರ್ಥಿಕ ವ್ಯವಹಾರಗಳ ಇಲಾಖೆಯ ಮೂಲಕ ವಿಶ್ವ ಬ್ಯಾಂಕ್ಗೆ ಮೊರೆ ಹೋಗಲಿದೆ.
ಸಚಿವ ಸಂಪುಟ ಸಭೆಯ ಇತರ ನಿರ್ಧಾರಗಳು
ಹಣಕಾಸು ಸಂಸ್ಥೆಗಳಲ್ಲಿ ಕರ್ನಾಟಕ ಠೇವಣಿದಾರರ ಹಿತಾಸಕ್ತಿ ರಕ್ಷಣೆ (ತಿದ್ದುಪಡಿ) ಮಸೂದೆ, 2024
ರಾಷ್ಟ್ರೀಯ ಉಚಿತ ರೋಗನಿರ್ಣಯ ಮತ್ತು ಉಚಿತ ಔಷಧ ಸೇವೆಗಳ ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯ ಪ್ರಯೋಗಾಲಯಗಳಿಗೆ ಡಯಾಗ್ನೋಸ್ಟಿಕ್ ಕಿಟ್ಗಳನ್ನು 19.70 ಕೋಟಿಗಳಲ್ಲಿ ಖರೀದಿ
ಎಸ್ಸಿಪಿ/ಟಿಎಸ್ಪಿ ಅಡಿಯಲ್ಲಿ ಎಸ್ಸಿ/ಎಸ್ಟಿ ಹಾಸ್ಟೆಲ್ಗಳಿಗೆ ರೂ 42 ಕೋಟಿಯಲ್ಲಿ ಬಂಕ್ ಬೆಡ್ಗಳ ಪೂರೈಕೆ
ಕೆಕೆಆರ್ಡಿಬಿ ಅಡಿಯಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿಯಿಂದ ಯಡ್ರಾಮಿಗೆ ರಸ್ತೆ ಸುಧಾರಣೆಗೆ 25 ಕೋಟಿ ರೂಪಾಯಿ
ಹೊಸಕೋಟೆ ತಾಲೂಕಿನ ರಸ್ತೆ ಅಭಿವೃದ್ಧಿಗೆ 97.27 ಕೋಟಿ ರೂಪಾಯಿ, ರಾಜ್ಯದ ಪಾಲು 54.25 ಕೋಟಿ ರೂಪಾಯಿ
ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ನಿರ್ಮಿಸಲು 40.50 ಕೋಟಿ ರೂಪಾಯಿ