
ಬೆಂಗಳೂರು: ನಗರದ ಕೆ.ಸಿ.ಜನರಲ್ ಆಸ್ಪತ್ರೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಸಮಸ್ಯೆಗಳ ಸರಮಾಲೆಯೇ ಅನಾವರಣಗೊಂಡಿದೆ.
ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಮತ್ತು ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ ಮತ್ತು ಬಿ.ವೀರಪ್ಪ ಅವರು ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ದಿಢೀರ್ ತಪಾಸಣೆ ನಡೆಸಿದರು. ಬೆಂಗಳೂರಿನ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾದ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ತಪಾಸಣೆ ವೇಳೆ ಹಲವು ಅವ್ಯವಸ್ಥೆಗಳು ಕಂಡು ಬಂದಿವೆ. ಆಸ್ಪತ್ರೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ.
ರೋಗಿಗಳನ್ನು ದಾಖಲಿಸಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು ತಪಾಸಣೆಯಿಂದ ಬೆಳಕಿಗೆ ಬಂದಿದೆ. ಇತ್ತೀಚೆಗೆ ಗರ್ಭಿಣಿಯೊಬ್ಬರಿಗೆ ತಡರಾತ್ರಿ ಹೆರಿಗೆಗೆ ತಕ್ಷಣ ಪ್ರವೇಶ ನಿರಾಕರಿಸಲಾಗಿದ್ದು, ಎಂದು ವರದಿಯಾಗಿದೆ. ಆಕೆಯ ಪತಿ ಹಣ ಪಾವತಿಸಲು ಸಾಧ್ಯವಾಗದಿದ್ದಾಗ, ಅವರ ‘ತಾಯಿ ಮತ್ತು ಮಕ್ಕಳ ರಕ್ಷಣಾ ಕಾರ್ಡ್’ ಕಿತ್ತುಕೊಳ್ಳಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು, ನರ್ಸ್ಗಳು ಮತ್ತು ಇತರ ಸಿಬ್ಬಂದಿಯ ವಿಚಾರಣೆ ವೇಳೆ ಈ ಘಟನೆ ದೃಢಪಟ್ಟಿದೆ. ವೈದ್ಯರು ಕರ್ತವ್ಯಕ್ಕೆ ತಡವಾಗಿ ಬರುತ್ತಿರುವುದು ಕಂಡು ಬಂತು. ಬೆಳಿಗ್ಗೆ 9 ಗಂಟೆಗೆ ಐವರು ಕೆಲಸ ಪ್ರಾರಂಭಿಸಬೇಕಾಗಿದ್ದರೂ 10 ಗಂಟೆಗೆ ಒಬ್ಬ ವೈದ್ಯರು ಮಾತ್ರ ಹಾಜರಿದ್ದರು. ಆಸ್ಪತ್ರೆಯಲ್ಲಿ ಈ ಔಷಧಗಳು ದಾಸ್ತಾನು ಇದ್ದರೂ ಹೊರಗಿನ ಔಷಧಾಲಯಗಳಿಂದ ಔಷಧಗಳನ್ನು ಖರೀದಿಸಲು ವೈದ್ಯರು ಶಿಫಾರಸು ಮಾಡುತ್ತಾರೆ ಎಂದು ರೋಗಿಗಳು ಆರೋಪಿಸಿದ್ದಾರೆ.
ರಿಜಿಸ್ಟರ್ನಲ್ಲಿ ಅಲಭ್ಯವೆಂದು ಗುರುತಿಸಲಾದ ಔಷಧಿಗಳು ತಪಾಸಣೆಯ ಸಮಯದಲ್ಲಿ ಕಂಡು ಬಂದಿವೆ. ಅವಧಿ ಮೀರಿದ ಔಷಧಿಗಳನ್ನು ವಿಲೇವಾರಿ ಮಾಡಲಾಗಿಲ್ಲ. ಔಷಧಾಲಯವು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ತುರ್ತು ಸಂದರ್ಭಗಳಲ್ಲಿ ರೋಗಿಗಳು ಔಷಧಗಳನ್ನು ಪಡೆಯಲು ಪರದಾಡುವಂತಾಗಿದೆ.
ನೈರ್ಮಲ್ಯ ಮತ್ತು ಮೂಲಸೌಕರ್ಯಗಳು ಶೋಚನೀಯ ಸ್ಥಿತಿಯಲ್ಲಿವೆ. ಮಕ್ಕಳ ತೀವ್ರ ನಿಗಾ ಘಟಕವು ಕೇವಲ ಒಂದು ಕಾರ್ಯನಿರ್ವಹಿಸುವ ವೆಂಟಿಲೇಟರ್ ಹೊಂದಿದೆ. ಹೆರಿಗೆ ವಾರ್ಡ್ನಲ್ಲಿರುವ ಇಸಿಜಿ ಯಂತ್ರ ಮತ್ತು ಡಾಪ್ಲರ್ ಪರೀಕ್ಷಾ ಸಾಧನಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಕುಡಿಯುವ ನೀರಿನ ಸೌಲಭ್ಯವೂ ಸಾಕಷ್ಟಿಲ್ಲ ಮತ್ತು ಸುಮಾರು 1,500 ರಿಂದ 1,750 ರೋಗಿಗಳಿಗೆ ಕೇವಲ ಒಂದು ಶೌಚಾಲಯ ಮಾತ್ರ ಲಭ್ಯವಿರುವುದು ತಿಳಿದು ಬಂದಿದೆ. ಸರ್ಕಾರಿ ಕಚೇರಿಗಳಲ್ಲಿ ಅಗತ್ಯವಿರುವಂತೆ ಲೋಕಾಯುಕ್ತ ಸಹಾಯವಾಣಿ ಸಂಖ್ಯೆ ಪ್ರದರ್ಶಿಸುವ ಕಡ್ಡಾಯ ನಾಮಫಲಕ ಇಲ್ಲದಿರುವುದನ್ನು ಗಮನಿಸಿದ ಲೋಕಾಯುಕ್ತರು, ಸಮಗ್ರ ವರದಿ ಸಿದ್ಧಪಡಿಸಲು ನ್ಯಾಯಾಂಗ ಮತ್ತು ಪೊಲೀಸ್ ಅಧಿಕಾರಿಗಳ ತಂಡದಿಂದ ವಿಸ್ತೃತ ತನಿಖೆಗೆ ಆದೇಶಿಸಿದ್ದಾರೆ.




