ಹುಬ್ಬಳ್ಳಿ: ಮಾತೆತ್ತಿದರೆ ಅಹಿಂದ, ದಲಿತ ಪರ ಎನ್ನುವ ಕಾಂಗ್ರೆಸ್ ಸರ್ಕಾರವೇ ಈಗ ಒಬಿಸಿಯಲ್ಲಿ ದಲಿತರಿಗಿದ್ದ ಮೀಸಲಾತಿ ಕಿತ್ತುಕೊಂಡು ಮುಸ್ಲಿಂರಿಗೆ ಕೊಡಲು ಹೊರಟಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.
ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮುಸ್ಲಿಂ ಓಲೈಕೆಗಾಗಿ ದಲಿತರಿಗೆ ಹೀಗೆ ಅನ್ಯಾಯ ಮಾಡುತ್ತಿದ್ದಾರೆ. ಅಂಬೇಡ್ಕರ್, ಬಾಬು ಜಗಜೀವನ ರಾಮ್ ಅವರಿಗೆ ಅವಮಾನ ಮಾಡಿದ್ದು, ಅವಕಾಶವಾದಿ ರಾಜಕಾರಣ ಮಾಡುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ನವರೇ ಹೀಗೆ ಡಬಲ್ ಸ್ಟ್ಯಾಂಡ್ ತೆಗೆದುಕೊಳ್ಳುತ್ತಿದ್ದಾರೆ ನಾವಲ್ಲ ಎಂದು ಸ್ಪಷ್ಟ ಪಡಿಸಿದರು.
ಕಾಂಗ್ರೆಸ್ ನಾಯಕರು ಕರ್ನಾಟಕಕ್ಕೆ ವಸೂಲಿಗೆ ಬರುತ್ತಾರೆ ಅಷ್ಟೇ. ಪ್ರಧಾನಿ ಮೋದಿ ಅವರ ಬಗ್ಗೆ, ಬಿಜೆಪಿ ಬಗ್ಗೆ ಮಾತನಾಡುವ ಯೋಗ್ಯತೆ ಇವರಿಗಿಲ್ಲ ಎಂದು ಜೋಶಿ ತಿರುಗೇಟು ನೀಡಿದರು.
ಕರ್ನಾಟಕ, ತೆಲಂಗಾಣ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಹಿಮಾಚಲ ಪ್ರದೇಶದಲ್ಲಿ ಅವರ ಸರ್ಕಾರ ತೇಲಾಡುತ್ತಿದೆ. ದೇಶದ ಜನ ಕಾಂಗ್ರೆಸ್ಸಿಗರ ಡಬಲ್ ಸ್ಟ್ಯಾಂಡ್ ಅನ್ನು ನೋಡಿ ಬಿಟ್ಟಿದ್ದಾರೆ. ಹಾಗಾಗಿ ಈ ಸ್ಥಿತಿಗೆ ತಂದಿದ್ದಾರೆ ಎಂದು ಲೇವಡಿ ಮಾಡಿದರು.
ದೇಶದಲ್ಲಿ 230 ಕ್ಷೇತ್ರಗಳಿಗೆ ಸ್ಪರ್ಧಿಸಿದ್ದಾರೆ. ಅಧಿಕಾರಕ್ಕೆ ಬರುವಷ್ಟು ಸ್ಥಾನಗಳಿಗೂ ಸ್ಪರ್ಧಿಸದ ಇವರು ಬಿಜೆಪಿ, ಮೋದಿ ಬಗ್ಗೆ ಮಾತಾಡುತ್ತಾರೆ. ಇದು ಅವರ ಹತಾಶೆಯನ್ನು ತೋರಿಸುತ್ತದೆ ಎಂದು ಜೋಶಿ ಹೇಳಿದರು.
ಅವರ ಡಿಎನ್ಎ ಬಗ್ಗೆ ದೇಶದ ಜನಕ್ಕೆ ಗೊತ್ತಿದೆ ಎಂದು ಕಾಂಗ್ರೆಸ್ ಗೆ ತಿರುಗೇಟು ಕೊಟ್ಟ ಜೋಶಿ, ಪ್ರಧಾನಿ ನರೇಂದ್ರ ಮೋದಿ ದೇಶ ಪರಿವರ್ತನೆಯ ನಾಯಕ ಎಂಬುದನ್ನು ಜನ ನಂಬಿದ್ದಾರೆ ಎಂದು ಹೇಳಿದರು.
ದೇಶದಲ್ಲಿನ ಎಲ್ಲ ಸರ್ವೆಗಳಲ್ಲಿ ಬಿಜೆಪಿ 370, 380 ಗೆಲ್ಲುತ್ತದೆ ಎಂಬ ವರದಿ ಇದೆ. ಆದರೆ, ನಾವು 400 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.