ರಾಜಕೀಯ

ಸಂಸತ್ ಭದ್ರತಾ ವೈಫಲ್ಯ ಶಾ ಹೇಳಿಕೆಗೆ ಒತ್ತಾಯಿಸಿ ಪ್ರತಿಭಟನೆ : 33 ಸಂಸದರ ಅಮಾನತು

ನವದೆಹಲಿ : ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ವಿರೋಧ ಪಕ್ಷಗಳ 33 ಸಂಸದರನ್ನ ಲೋಕಸಭೆಯಿಂದ ಇಂದು ಅಮಾನತು ಮಾಡಲಾಗಿದೆ. ಈವರೆಗೆ ಸಂಸತ್​​​ನಲ್ಲಿ ಭದ್ರತಾ ವೈಫಲ್ಯ ಖಂಡಿಸಿ ಪ್ರತಿಭಟಿಸಿದ್ದ ಒಟ್ಟು 47 ಸಂಸದರನ್ನ ಅಮಾನತು ಮಾಡಲಾಗಿದೆ.


ಕಾಂಗ್ರೆಸ್ ನಾಯಕ ಅಧೀರ್​ ರಂಜನ್​​ ಚೌಧರಿ, ಡಿಎಂಕೆ ಸಂಸದರಾದ ಟಿ.ಆರ್​. ಬಾಲು, ದಯಾನಿಧಿ ಮಾರನ್​, ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್​​ ಇಂದು ಅಮಾನತುಗೊಂಡ ಸಂಸದರ ಪಟ್ಟಿಯಲ್ಲಿದ್ದಾರೆ. ಕಾಂಗ್ರೆಸ್​​ ಸಂಸದರಾದ ಕೆ.ಎ. ಜಯಕುಮಾರ್, ವಿಜಯ್​ ವಸಂತ್​​​, ಅಬ್ದುಲ್ ಖಲೇಖ್​ ಅವರು ಸ್ಪೀಕರ್​​ ಪೀಠದ ಒಳಗೆ ಬಂದು ಪ್ರತಿಭಟಿಸಿ ಘೋಷಣೆ ಕೂಗಿದ್ದರು. ಈ ಮೂವರನ್ನ ಹಕ್ಕು ಭಾಧ್ಯತಾ ಸಮಿತಿ ವರದಿ ಬರುವವರೆಗೆ ಹಾಗೂ ಉಳಿದ 30 ಸಂಸದರನ್ನು ಚಳಿಗಾಲದ ಅಧಿವೇಶನದ ಬಾಕಿ ಅವಧಿಯಿಂದ ಅಮಾನತು ಮಾಡಲಾಗಿದೆ.ಇದೇ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿಯವರು ಮಂಡಿಸಿದ ಸಂಸದರ ಅಮಾನತು ನಿಲುವಳಿಯು, ಧ್ವನಿ ಮತದ ಮುಖಾಂತರ ಅಂಗೀಕಾರಗೊಂಡಿತು. ಗದ್ದಲ ಉಂಟಾದ ಕಾರಣ ಸದನವನ್ನು ನಾಳೆಗೆ ಮುಂದೂಡಲಾಯಿತು.

ಶಾ ಹೇಳಿಕೆಗೆ ಪಟ್ಟು ಹಿಡಿದ ಸಂಸದರು.

ಡಿಸೆಂಬರ್​​ 13 ರಂದು ನಡೆದ ಭದ್ರತಾ ವೈಫಲ್ಯ ಕುರಿತು ಗೃಹಸಚಿವ ಅಮಿತ್​​ ಶಾರವರು ಪ್ರತಿಕ್ರಿಯೆ ನೀಡಬೇಕು ಎಂದು ವಿರೋಧ ಪಕ್ಷದ ಸಂಸದರು ಪಟ್ಟು ಹಿಡಿದಿದ್ದಾರೆ.
ಇದೇ ವಿಚಾರವಾಗಿ ಡಿಸೆಂಬರ್ 14 ರಂದು ಪ್ರತಿಭಟಿಸಿದ್ದ ರಾಜ್ಯಸಭೆ ಮತ್ತು ಲೋಕಸಭೆಯ 14 ಸಂಸದರನ್ನ ಅನುಚಿತ ವರ್ತನೆ ತೋರಿದ ಆರೋಪದಲ್ಲಿ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ. ಈವೆರೆಗೆ ಒಟ್ಟು 47 ಸಂಸದರು ಅಮಾನತು ಆಗಿದ್ದಾರೆ. ಈ ಪೈಕಿ ಟಿಎಂಸಿ ನಾಯಕ ಡೆರೆಕ್​ ಒಬ್ರಾಯನ್​ ಮಾತ್ರ ರಾಜ್ಯಸಭೆ ಸದಸ್ಯರಾಗಿದ್ದಾರೆ.

Comments (0)

Your email address will not be published. Required fields are marked *

Back to top button