ಧಾರವಾಡ : ರಾಜ್ಯದಲ್ಲಿ ಲೋಕ ಅಖಾಡ ರಂಗೇರಿದ್ದು, ಚುನಾವಣಾ ಅಭ್ಯರ್ಥಿಗಳು ಅಧಿಕೃತ ಪ್ರಚಾರ ಆರಂಭಿಸಿದ್ದಾರೆ. ಇನ್ನು ಧಾರವಾಡ ಕ್ಷೇತ್ರದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಮ್ಮ ಕ್ಷೇತ್ರದಲ್ಲಿ ಅಧೀಕೃತವಾಗಿ ಪ್ರಚಾರ ಆರಂಭಿಸಿದ್ದಾರೆ. ಅಲ್ಲದೆ ಮಾತನಾಡಿದ ಅವರು, ಹತ್ತು ವರ್ಷ ಮೋದಿ ಹೇಳಿದ ಸುಳ್ಳುಗಳಿವೆ. ಅದನ್ನು ಜನರಿಗೆ ತಿಳಿಸುತ್ತೇವೆ. ಜನರ ಮನೆ ಮನೆಗೆ ಹೋಗಿ ನಾವು ಮಾಡಿದ ಕಾರ್ಯಕ್ರಮ ಹಾಗೂ 70 ವರ್ಷದ ಇತಿಹಾಸ ಹೇಳುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಯುವ ನಾಯಕರ ರಜತ್ ಸಹ ಟಿಕೆಟ್ ಕೇಳಿದ್ದರು. ಆಕಾಂಕ್ಷಿಗಳೆಲ್ಲ ಒಪ್ಪಿ ವಿನೋದ ಅಸೂಟಿ ಪರ ಬಂದಿದ್ದಾರೆ. ಒಂದು ಆಶ್ಚರ್ಯಕರ ಫಲಿತಾಂಶ ಬರುತ್ತದೆ. ಎಲ್ಲರೂ ಜವಾಬ್ಧಾರಿ ವಹಿಸಿ ಕೆಲಸ ಮಾಡುತ್ತೇವೆ ಹಾಗೂ ಕಾರ್ಯಕರ್ತರು, ಮುಖಂಡರು ಸೇರಿ ಕಾಂಗ್ರೆಸ್ನ ಗೆಲ್ಲಿಸುತ್ತೇವೆ. ಎದುರಾಳಿ ಅಭ್ಯರ್ಥಿ ಬಹಳ ಸಲ ಗೆದ್ದವರು. ಕಳೆದ ನಾಲ್ಕು ಸಲ ಗೆದ್ದಿದ್ದಾರೆ. ಹೀಗಾಗಿ ಅವರ ಬಗ್ಗೆ ನಾವು ಗೇಲಿ ಮಾಡುವುದಿಲ್ಲ. ಆದರೆ ಈಗ ಇರುವ ಪರಿಸ್ಥಿತಿ ಬೇರೆ ಇದೆ. ಮಾಧ್ಯಮಗಳಲ್ಲಿ ಪ್ರಧಾನಿ ಮಿಂಚುತ್ತಿದ್ದು, ಅವರು ಮಾಧ್ಯಮಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ ಎಂದರು.
ನನಗೆ ಮೋದಿ ಬೈಯೋಕೆ ಇಟ್ಟಿದ್ದಾರೆಂದು ಪ್ರಹ್ಲಾದ ಜೋಶಿ ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ಇಲ್ಲಿಯವರೆಗೂ ನಾನು ಮೋದಿಯವರನ್ನ ವೈಯಕ್ತಿಕವಾಗಿ ಬೈದಿಲ್ಲ. ರಾಜಕೀಯ ಜೀವನದಲ್ಲಿ ಮೋದಿ ಮತ್ತು ಜೋಶಿಯವರಿಗೆ ವೈಯಕ್ತಿಕವಾಗಿ ಬೈದಿಲ್ಲ. ಆ ಮಟ್ಟಕ್ಕೆ ನಾನು ಇನ್ನು ಬೆಳೆದಿಲ್ಲ. ನಾವು ಕೇಳಿದ ಪ್ರಶ್ನೆಗೆ ಉತ್ತರ ಕೊಡಲು ಆಗಿಲ್ಲ. ಹೀಗಾಗಿ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಇನ್ನು ಸಂಘಟಿತವಾಗಿ ಕೆಲಸ ಮಾಡಲು ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.