
ರಾಮನಗರ: ಗ್ಯಾಸ್ ಸಮಸ್ಯೆ ಬಗೆಹರಿಸದ ಸರ್ಕಾರದ ವಿರುದ್ಧ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದು, ರಾಮನಗರದ ಐಜೂರು ವೃತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತಮಟೆ ಚಳುವಳಿ ನಡೆಸಿದ್ದಾರೆ.
ಗ್ಯಾಸ್ ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ರಾಜ್ಯದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳು ಉಪಚುನಾವಣೆಯಲ್ಲಿ ಮುಳುಗಿವೆ. ಆಟೋ ಚಾಲಕರು, ಹೋಟೆಲ್ ಮಾಲೀಕರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ನಿತ್ಯ ಬಂಕ್ ಮುಂದೆ ಆಟೋ ಚಾಲಕರು ಕಾದುಕಾದು ಸುಸ್ತಾಗಿದ್ದಾರೆ. ಇಷ್ಟಾದರೂ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕೂಡಲೇ ಗ್ಯಾಸ್ ಸಮಸ್ಯೆ ಬಗೆಹರಿಸದಿದ್ರೆ ಆಟೋ ಚಾಲಕರ ಜೊತೆಗೂಡಿ ಬೃಹತ್ ಹೋರಾಟ ನಡೆಸುತ್ತೇವೆ ಎಂದು ಕಿಡಿಕಾರಿದ ವಾಟಾಳ್, ಯುದ್ಧದ ಸಮಯದಲ್ಲಿ ಐಪಿಎಲ್ ಪಂದ್ಯಾವಳಿಗೆ ಆಯೋಜನೆಗೆ ಕಿಡಿಕಾರಿದ್ದಾರೆ.

ಜನ ಯುದ್ಧದಿಂದ ಬೆಲೆ ಏರಿಕೆ ಆಗಿ ಸಾಯುತ್ತಿದ್ದಾರೆ. ಸರ್ಕಾರ ಕಾರ್ಪೋರೇಟ್ ಸಂಸ್ಥೆಗಳ ತಾಳಕ್ಕೆ ತಕ್ಕಂತೆ ಐಪಿಎಲ್ಗೆ ಅನುಮತಿ ಕೊಟ್ಟಿದೆ. ಅಲ್ಲದೇ ಐಪಿಎಲ್ ವಿಜಯೋತ್ಸವದ ವೇಳೆ 11 ಜನ ಸತ್ತಿದ್ದಾರೆ. ಅವರ ಕುಟುಂಬಕ್ಕೆ ಯಾವ ತಂಡವೂ ಸೂಕ್ತ ಪರಿಹಾರ ಕೊಡಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಐಪಿಎಲ್ ಬೇಡ. ಕೂಡಲೇ ಐಪಿಎಲ್ ಪಂದ್ಯಾವಳಿಗಳನ್ನ ನಿಲ್ಲಿಸುವಂತೆ ಸರ್ಕಾರಕ್ಕೆ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.




