ಪತ್ನಿಯ ಅನೈತಿಕ ಸಂಬಂಧಕ್ಕೆ ಅರ್ಚಕ ಬಲಿ

ಮಂಡ್ಯ : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದನೆಂಬ ಕಾರಣಕ್ಕೆ ಪತ್ನಿಯೇ ತನ್ನ ಪ್ರಿಯಕರನ ಮೂಲಕ ಪತಿಯನ್ನು ಕೊಲೆ ಮಾಡಿಸಿರುವ ಘಟನೆ ಮಂಡ್ಯದ ಮರಳಗಾಲ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಸಿದ್ದಲಿಂಗಪ್ಪ ಎಂದು ಗುರುತಿಸಲಾಗಿದ್ದು, ಇವರು ಅರ್ಚಕ ವೃತ್ತಿ ಮಾಡುತ್ತಿದ್ದರು. ಈ ಸಂಬಂಧ ಪತ್ನಿ ಶಾಲಿನಿ ಹಾಗೂ ಆಕೆಯ ಪ್ರಿಯಕರ ಹರೀಶ್ನನ್ನು ಪೊಲೀಸರು ಬಂಧಿಸಿದ್ದಾರೆ.

ಶಾಲಿನಿ ಹಾಗೂ ಹರೀಶ್ ನಡುವೆ ಇದ್ದ ಅಕ್ರಮ ಸಂಬಂಧದ ವಿಚಾರ ಒಂದೂವರೆ ವರ್ಷದ ಹಿಂದೆಯೇ ಪತಿ ಸಿದ್ದಲಿಂಗಪ್ಪನಿಗೆ ತಿಳಿದಿತ್ತು. ಪತ್ನಿ ಮದುವೆಯ ನಂತರವೂ ದಾರಿ ತಪ್ಪುತ್ತಿರುವುದನ್ನು ಕಂಡು ಸಿದ್ದಲಿಂಗಪ್ಪ ಹಲವು ಬಾರಿ ಬುದ್ಧಿವಾದ ಹೇಳಿದ್ದರು.
ಇದರಿಂದ ರೊಚ್ಚಿಗೆದ್ದ ಶಾಲಿನಿ, ಪತಿಯನ್ನು ಮುಗಿಸಲು ಸಂಚು ರೂಪಿಸಿದ್ದಳು. ಮಾ.6ರಂದು ಸಿದ್ದಲಿಂಗಪ್ಪ ಪೂಜೆ ಮುಗಿಸಿ ಬೈಕ್ನಲ್ಲಿ ಮರಳುತ್ತಿದ್ದಾಗ, ಶಾಲಿನಿ ನೀಡಿದ ಮಾಹಿತಿಯಂತೆ ಹರೀಶ್ ತನ್ನ ಇಬ್ಬರು ಸ್ನೇಹಿತರೊಂದಿಗೆ ನಾಲೆ ಏರಿಯ ಬಳಿ ಅಡ್ಡಗಟ್ಟಿದ್ದಾನೆ.
ತಲೆಗೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿ, ಅಪಘಾತದಂತೆ ಬಿಂಬಿಸಲು ಮೃತದೇಹವನ್ನು ನಾಲೆಯಲ್ಲಿ ಎಸೆದಿದ್ದರು. ನಾಲೆ ದಡದಲ್ಲಿ ರಕ್ತದ ಕಲೆ ಹಾಗೂ ಚಪ್ಪಲಿ ಪತ್ತೆಯಾದ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.




