ಅಮೇರಿಕ: ಕ್ಯಾಲಿಫೋರ್ನಿಯಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (22) ನಾಪತ್ತೆಯಾಗಿರುವ ಘಟನೆ ವರದಿಯಾಗಿದ್ದು, ಕುಟುಂಬಸ್ಥರು ಹಾಗೂ ಭಾರತೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಬರ್ಕ್ಲೇನಲ್ಲಿ ಮಾಸ್ಟರ್ಸ್ ಮಾಡುತ್ತಿದ್ದ ಇವರು ಫೆಬ್ರವರಿ 10ರಿಂದ ಕಾಣೆಯಾಗಿದ್ದು, ಸದ್ಯ ಇವರ ಪತ್ತೆಗಾಗಿ ಅಲ್ಲಿನ ಪೊಲೀಸರು ಹಾಗೂ ಭಾರತೀಯ ದೂತಾವಾಸ ಕಚೇರಿ ಒಟ್ಟಿಗೆ ಕಾರ್ಯಾಚರಣೆ ನಡೆಸುತ್ತಿವೆ.
ಚೆನ್ನೈನ ಪ್ರತಿಷ್ಠಿತ ಮದ್ರಾಸ್ ಐಐಟಿಯಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಪೂರೈಸಿದ್ದ ಸಾಕೇತ್, ಬರ್ಕ್ಲೇ ವಿಶ್ವವಿದ್ಯಾಲಯದಲ್ಲಿ ಪ್ರಾಡಕ್ಟ್ ಡೆವಲಪ್ಮೆಂಟ್ ವಿಭಾಗದಲ್ಲಿ ಮಾಸ್ಟರ್ ಆಫ್ ಸೈನ್ಸ್ ಓದುತ್ತಿದ್ದರು. ಫೆಬ್ರವರಿ 10ರಂದು ಬರ್ಕ್ಲೇ ನಗರದ ಡ್ವೈಟ್ ವೇ ಪ್ರದೇಶದಲ್ಲಿ ಇವರು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಪೊಲೀಸರ ಪ್ರಕಾರ ಸಾಕೇತ್ ಸುಮಾರು 6 ಅಡಿ 1 ಇಂಚು ಎತ್ತರವಿದ್ದು, ಇವರು ಪ್ರಸ್ತುತ ಯಾವುದೋ ಸಂಕಷ್ಟ ಅಥವಾ ಅಪಾಯದ ಸ್ಥಿತಿಯಲ್ಲಿರುವ ಸಾಧ್ಯತೆಯಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬರ್ಕ್ಲೇ ಪೊಲೀಸರು ಸಾರ್ವಜನಿಕರ ಸಹಾಯ ಕೋರಿದ್ದು, ಯಾವುದೇ ಮಾಹಿತಿ ಸಿಕ್ಕರೂ ತಕ್ಷಣ ತಿಳಿಸಲು ಮನವಿ ಮಾಡಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸ ಕಚೇರಿಯು ಈ ಕುರಿತು ಎಕ್ಸ್ ಮೂಲಕ ಮಾಹಿತಿ ನೀಡಿದ್ದು, “ವಿದ್ಯಾರ್ಥಿ ಸಾಕೇತ್ ಕಾಣೆಯಾಗಿರುವ ವಿಷಯ ತಿಳಿದು ಆತಂಕವಾಗಿದೆ. ನಾವು ಅವರ ಕುಟುಂಬದವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರ ಸಹಕಾರದೊಂದಿಗೆ ಸಾಕೇತ್ ಪತ್ತೆಗಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ” ಎಂದು ತಿಳಿಸಿದೆ. ಸೆಮಿಕಂಡಕ್ಟರ್ ಮತ್ತು ಅಡ್ವಾನ್ಸ್ಡ್ ಮೆಟೀರಿಯಲ್ಸ್ ಕ್ಷೇತ್ರದಲ್ಲಿ ಭವಿಷ್ಯದ ಕನಸು ಕಂಡಿದ್ದ ಕನ್ನಡಿಗ ವಿದ್ಯಾರ್ಥಿ ಶೀಘ್ರವೇ ಸುರಕ್ಷಿತವಾಗಿ ಮರಳಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.


