ಮಥುರಾ : ಯಮುನಾ ಎಕ್ಸ್ಪ್ರೆಸ್ವೇನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವು ಅತಿವೇಗ ಮತ್ತು ಅಜಾಗರೂಕ ಚಾಲನೆಯ ಭೀಕರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ದೆಹಲಿಯಿಂದ ಕಾನ್ಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ನಲ್ಲಿದ್ದ ಪ್ರಯಾಣಿಕರು ಶೌಚಾಲಯಕ್ಕಾಗಿ ಇಳಿದಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ್ದು, ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುರಿರ್ ಪೊಲೀಸ್ ಠಾಣೆ ವ್ಯಾಪ್ತಿಯ ಮೈಲ್ಸ್ಟೋನ್ 88ರ ಬಳಿ ನಡೆದ ಈ ಘಟನೆಯು ಹೈವೇ ಸುರಕ್ಷತಾ ನಿಯಮಗಳ ಉಲ್ಲಂಘನೆಯಿಂದ ಉಂಟಾದ ದೊಡ್ಡ ಅನಾಹುತವಾಗಿದೆ.ಅಪಘಾತದ ಕುರಿತಾದ ಪ್ರಾಥಮಿಕ ವರದಿಯ ಪ್ರಕಾರ, ಬಸ್ ಚಾಲಕನು ವಾಹನವನ್ನು ನಿಗದಿತ ‘ಗ್ರೀನ್ ಝೋನ್’ ನಲ್ಲಿ ನಿಲ್ಲಿಸುವ ಬದಲು ನೇರವಾಗಿ ಎಕ್ಸ್ಪ್ರೆಸ್ವೇ ರಸ್ತೆಯಲ್ಲೇ ನಿಲ್ಲಿಸಿದ್ದಾನೆ. ಈ ವೇಳೆ ಬಸ್ನಿಂದ ಕೆಳಗೆ ಇಳಿದಿದ್ದ ಪ್ರಯಾಣಿಕರ ಮೇಲೆ ಹಿಂದಿನಿಂದ ಅತಿವೇಗವಾಗಿ ಬಂದ ಕಂಟೇನರ್ ಡಿಕ್ಕಿ ಹೊಡೆದಿದೆ. ಕಂಟೇನರ್ನ ವೇಗ ಮತ್ತು ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ, ರಸ್ತೆಯಲ್ಲಿ ನಿಂತಿದ್ದ ಆರು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.ಎಕ್ಸ್ಪ್ರೆಸ್ವೇಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಲು ಕಟ್ಟುನಿಟ್ಟಿನ ನಿಯಮಗಳಿದ್ದರೂ, ಚಾಲಕನ ಬೇಜವಾಬ್ದಾರಿಯುತ ನಿರ್ಧಾರ ಆರು ಕುಟುಂಬಗಳ ಕಣ್ಣೀರಿಗೆ ಕಾರಣವಾಗಿದೆ. ಕಂಟೇನರ್ ಚಾಲಕನ ಅತಿವೇಗ ಮತ್ತು ಬಸ್ ಚಾಲಕನ ನಿಯಮ ಉಲ್ಲಂಘನೆಯೇ ಈ ಅಪಘಾತಕ್ಕೆ ನೇರ ಕಾರಣವೆಂದು ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆ. #


