
ಬೆಂಗಳೂರಿನ ಐತಿಹಾಸಿಕ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ದ್ರೌಪದಿ ದೇವಿಗೆ ಭಕ್ತರು ಕಾಣಿಕೆಯಾಗಿ ನೀಡಿದ್ದ ಚಿನ್ನಾಭರಣ ಕಳ್ಳತನವಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ (EO) ನಾಗರಾಜ್ ಅವರೇ ಈ ಕೃತ್ಯ ಎಸಗಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ನೇರ ಆರೋಪ ಮಾಡಿದ್ದಾರೆ.
ದೇವಸ್ಥಾನದ ಹುಂಡಿ ಹಣ ಮತ್ತು ಚಿನ್ನಾಭರಣ ಎಣಿಕೆ ಮಾಡುವ ಸಂದರ್ಭದಲ್ಲಿ ಈ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಹುಂಡಿಯಲ್ಲಿ ಸಿಕ್ಕಿದ್ದ ಸುಮಾರು 63 ಗ್ರಾಂ ತೂಕದ ದೇವಿಯ ನೆಕ್ಲೇಸ್ ಅನ್ನು ಇಒ ನಾಗರಾಜ್ ಅವರು ಕಾನೂನುಬಾಹಿರವಾಗಿ ತಮ್ಮ ಜೇಬಿಗೆ ಹಾಕಿಕೊಂಡು ಹೋಗಿದ್ದಾರೆ ಎಂಬುದು ಸಿಸಿಟಿವಿ ದೃಶ್ಯಾವಳಿಗಳಿಂದ ಸಾಬೀತಾಗಿದೆ ಎಂದು ಸತೀಶ್ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ (RTI) ವಿವರಗಳನ್ನು ಪಡೆದಾಗ ಅಧಿಕಾರಿಯ ಭ್ರಷ್ಟಾಚಾರ ಬಯಲಿಗೆ ಬಂದಿದೆ.
ಮುಜರಾಯಿ ಇಲಾಖೆಯ ನಿಯಮಗಳ ಪ್ರಕಾರ, ದೇವಸ್ಥಾನದ ಯಾವುದೇ ಆಸ್ತಿಯನ್ನು ಆವರಣದಿಂದ ಹೊರಗೆ ಕೊಂಡೊಯ್ಯುವಂತಿಲ್ಲ. ಒಂದು ವೇಳೆ ಕೊಂಡೊಯ್ಯಬೇಕಾದರೂ ಅದಕ್ಕೆ ಕಟ್ಟುನಿಟ್ಟಿನ ಪ್ರಕ್ರಿಯೆಗಳಿರುತ್ತವೆ. ಆದರೆ, ಈ ಯಾವುದೇ ನಿಯಮಗಳನ್ನು ಪಾಲಿಸದೆ ಅಧಿಕಾರಿ ನೇರವಾಗಿ ದೇವಿಯ ಆಭರಣವನ್ನೇ ಕದ್ದಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಮುಜರಾಯಿ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದ್ದು, ಬೆಂಗಳೂರು ಕರಗೋತ್ಸವದ ಬಿಲ್ಗಳ ಪಾವತಿಯಲ್ಲೂ ಅಧಿಕಾರಿಗಳು ಶೇಕಡಾ 20 ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂದು ಸತೀಶ್ ಆರೋಪಿಸಿದ್ದಾರೆ. ಜಾಲದಲ್ಲಿ ಇಒ ನಾಗರಾಜ್ ಸೇರಿದಂತೆ ತಹಶಿಲ್ದಾರ್ ಅರವಿಂದ್ ಬಾಬು, ಎಡಿಸಿ ಜಗದೀಶ್, ಇಒ ನವೀನ್ ಮತ್ತು ಅಸಿಸ್ಟೆಂಟ್ ಕಮಿಷನರ್ ಪುರುಷೋತ್ತಮ್ ಎಂಬ ಐವರು ಅಧಿಕಾರಿಗಳ ತಂಡ ಶಾಮೀಲಾಗಿದೆ ಎಂದು ಅಧ್ಯಕ್ಷರು ಹೆಸರಿಸಿದ್ದಾರೆ. ಇತಿಹಾಸ ಪ್ರಸಿದ್ಧ ದೇವಸ್ಥಾನದ ಆಸ್ತಿ ಮತ್ತು ಭಕ್ತರ ಕಾಣಿಕೆಗೆ ರಕ್ಷಣೆ ಇಲ್ಲದಂತಾಗಿರುವುದು ಈಗ ನಗರದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.




