ರಾಜಕೀಯಸುದ್ದಿ

ಸಂಸದ ತೇಜಸ್ವಿ ಸೂರ್ಯ ಮೇಲೆ ಸಿಎಂ ಸಿದ್ದರಾಮಯ್ಯ ಗುಡುಗು

ಬೆಂಗಳೂರು: ಕೇಂದ್ರದ ಬಳಿ ರಾಜ್ಯಕ್ಕೆ ಕೊಡಬೇಕಾದ ದುಡ್ಡು ಬಿಜೆಪಿ ಸಂಸದರು ಕೇಳಲ್ಲ ಎಂದು ಸಿಎಂ ಸಿದ್ದರಾಮಯ್ಯ ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ದಕ್ಷಿಣದಲ್ಲಿ ಇದಾನಲ್ಲ, ಅಮವಾಸ್ಯೆ ತೇಜಸ್ವಿ ಸೂರ್ಯ ಕೇಂದ್ರದಿಂದ ಅನುದಾನ ತರಲ್ಲ ಎಂದು ಹೇಳಿದ್ದಾರೆ..

ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವೈಟ್‌ಟಾಪಿಂಗ್ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಬಿ.ವಿ.ಕೆ ಐಯ್ಯಂಗಾರ್ ರಸ್ತೆಯ ಆರ್.ಟಿ ಸ್ಟ್ರೀಟ್ ಜಂಕ್ಷನ್‌ನಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ, ರಾಜ್ಯದಿಂದ ಆರಿಸಿ ದೆಹಲಿಗೆ ಕಳುಹಿಸಿರುವ ರಾಜ್ಯದ ಸಂಸದರು ಕರ್ನಾಟಕಕ್ಕೆ ಕೊಡಬೇಕಾದ ದುಡ್ಡನ್ನು ಕೇಂದ್ರದ ಬಳಿ ಕೇಳಲ್ಲ. ಪಿಸಿ ಮೋಹನ್ ಕೇಳಲಿಲ್ಲ, ಅವನು ಯಾರು ಸೌತ್ ಅಲ್ಲಿ ಇದಾನಲ್ಲ ಅಮಾವಾಸ್ಯೆ ತೇಜಸ್ವಿ ಸೂರ್ಯ ಕೇಂದ್ರದ ಬಳಿ ಹಣ ಕೇಳಲಿಲ್ಲ. ಆಯಮ್ಮ ಶೋಭಾ ಕರಂದ್ಲಾಜೆ ಕೂಡ ಹಣ ತರಲ್ಲ. ಮಂತ್ರಿ ಆಗಿರುವ ಕುಮಾರಸ್ವಾಮಿ ಕೂಡ ಕೇಂದ್ರದ ಬಳಿ ಹಣ ಕೇಳಿಲ್ಲ. ಅದಕ್ಕೆ ಕುಮಾರಸ್ವಾಮಿ ಸೇರಿ ಎಲ್ಲ ಎಂಪಿಗಳನ್ನು ಸೋಲಿಸಿ ಎಂದು ಕರೆ ನೀಡಿದರು.

ಪ್ರಧಾನಿ ಮೋದಿಗೆ ಕರ್ನಾಟಕದ ಮೇಲೆ ದ್ವೇಷವಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹಣ ಬರಲ್ಲ. ನಾವು ಕೊಟ್ಟ ತೆರಿಗೆ ಹಣವೂ ವಾಪಸ್ ಕೊಡಲ್ಲ. ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ಒಂದು ರೂಪಾಯಿ ಕೊಡ್ತೇವೆ. ಆದರೆ ನಮಗೆ ಕೇಂದ್ರದಿಂದ 14-15 ಪೈಸೆ ತೆರಿಗೆ ವಾಪಾಸ್ ಬರುತ್ತದೆ ಅಷ್ಟೇ. ಇನ್ನೂ ಬಿಜೆಪಿಯವರು ಕೇಂದ್ರದ ಹಣ ಅಂತಾರೆ. ಬಿಜೆಪಿಯವರು ಜಿಎಸ್‌ಟಿ ಇಳಿಕೆಯನ್ನ ದೀಪಾವಳಿ ಗಿಫ್ಟ್ ಅಂತಾ ಬ್ಯಾನರ್ ಹಾಕಿಕೊಳ್ಳುತ್ತಾರೆ. ಎಂಟು ವರ್ಷ ತೆರಿಗೆ ವಸೂಲಿ ಮಾಡಿ ಈಗ ದೀಪಾವಳಿ ಗಿಫ್ಟ್ ಅಂತೆ. ಯಾವ ದೀಪಾವಳಿ ಗಿಫ್ಟ್ ಅಪ್ಪ ಇದು ಎಂದು ಟಾಂಗ್ ಕೊಟ್ಟರು.

ಗಾಂಧಿನಗರ ಕ್ಷೇತ್ರದ ಶಾಸಕರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಯೋಜನೆ ಇಲಾಖೆ ಸಚಿವರಾದ ಡಿ. ಸುಧಾಕರ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಮತ್ತಿತರರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments (0)

Your email address will not be published. Required fields are marked *

Back to top button