
ಕೋಲಾರ: ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದಕ್ಕೆ ಇಬ್ಬರು ಪ್ರೇಮಿಗಳು ರೈಲಿಗೆ ತಲೆಕೊಟ್ಟು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬ್ಯಾಟರಾಯನಹಳ್ಳಿಯಲ್ಲಿ ನಡೆದಿದೆ.. ಶೆಟ್ಟಹಳ್ಳಿ ಗ್ರಾಮದ ಸತೀಶ್ (18) ಪಣಮಾಕನಹಳ್ಳಿ ಶ್ವೇತ (17) ಮೃತ ಪ್ರೇಮಿಗಳು.
ಸತೀಶ್ ಮತ್ತು ಶ್ವೇತ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಮನೆಯವರು ತಮ್ಮ ಪ್ರೀತಿಯನ್ನು ವಿರೋಧಿಸಬಹುದು ಎಂದು ಊಹಿಸಿ ಬ್ಯಾಟರಾಯನಹಳ್ಳಿ ತಾಲೂಕಿನ ಹೊರವಲಯದಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಂಡು ರೈಲಿಗೆ ತಲೆಕೊಟ್ಟಿದ್ದಾರೆ.
ಶ್ವೇತ ಅಪ್ರಾಪ್ತೆಯಾಗಿದ್ದು, ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರು. ಇಬ್ಬರ ಪ್ರೀತಿಯ ಬಗ್ಗೆ ಎರಡು ಕುಟುಂಬದವರು ನಮಗೆ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಾರೆ. ಸತೀಶ್ ನಿನ್ನೆ ಹುಟ್ಟು ಹಬ್ಬದ ಹಿನ್ನೆಲೆ ಗ್ರಾಮದ ಸ್ನೇಹಿತರೊಂದಿಗೆ ಅದ್ದೂರಿಯಾಗಿ ಆಚರಣೆ ಮಾಡಿಕೊಂಡಿದ್ದ.
ಬೆಳಿಗ್ಗೆ ಎದ್ದ ನಂತರ ತನ್ನ ತಾಯಿಗೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾನೆ. ಮನೆಯವರು ಎಲ್ಲೋ ಕೆಲಸಕ್ಕೆ ಹೋಗಿರಬೇಕು ಎಂದುಕೊಂಡಿದ್ದರು. ಆದರೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಕುಟುಂಬಸ್ಥರಿಗೆ ಸ್ಥಳೀಯರೊಬ್ಬರು ಸತೀಶ್ ಹುಡುಗಿಯೊಬ್ಬಳ ಜೊತೆಗೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದರು. ಸ್ಥಳಕ್ಕೆ ಬೆಂಗಳೂರಿನ ರೈಲ್ವೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.




