ರಾಯಚೂರು : ಕಳ್ಳತನ ಪ್ರಕರಣವೊಂದರ ತನಿಖೆಗೆ ಹೊರಟ ಪೊಲೀಸ್ರಿಗೆ ಭರ್ತಿ ಬತಾಸ್ ಕೊಟ್ಟಿದ್ದಾರೆ ಐನಾತಿ ಯುವಕರು. ಇಂತಹದ್ದೊಂದು ಘಟನೆ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಬಳಗನೂರಿನಲ್ಲಿ ನಡೆದಿದೆ. ವಿಚಾರಣೆಗೆ ತೆರಳಿದ್ದ ವೇಳೆ ಈ ಅಟ್ಯಾಕ್ ನಡೆದಿದೆ. ಹೌದು. ಮಸ್ಕಿ ತಾಲೂಕಿನ ಬಳಗಾನೂರು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣದಲ್ಲಿ ಮೋಡೆಕಾರ ದುರುಗಪ್ಪ ಸೇರಿ ಹಲವರು ಭಾಗಿಯಾಗಿದ್ದ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನಲೆ ಪೊಲೀಸರಾದ ಮಂಜುನಾಥ, ಗೋಪಾಲ ಎಂಬವರು ದುರುಗಪ್ಪನ ವಿಚಾರಣೆಗಾಗಿ ತೆರಳಿದ್ದರು.
ಕಾನ್ಸ್ಟೇಬಲ್ ಮಂಜುನಾಥ, ಗೋಪಾಲ ಹಸ್ಮಕಲ್ ಗ್ರಾಮಕ್ಕೆ ತೆರಳಿ ವಿಚಾರಣೆ ನಡೆಸಿದ್ದರು. ಈ ವೇಳೆ ದುರುಗಪ್ಪ ಕಾನ್ಸ್ಟೇಬಲ್ಸ್ ಜೊತೆ ವಾಗ್ವಾದಕ್ಕಿಳಿದಿದ್ದಾನೆ. ವಾಲ್ಮೀಕಿ ವೃತ್ತದ ಬಳಿ ಮಾತಿಗೆ ಮಾತು ಬೆಳೆದು ಕಾನ್ಸ್ಟೇಬಲ್ಗಳ ಮೇಲೆ ದುರುಗಪ್ಪ ಸೇರಿ ಇತರರು ಅಟ್ಯಾಕ್ ಮಾಡಿದ್ದಾರೆ.
ಈ ಕೃತ್ಯ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಮಂಜುನಾಥ ಮತ್ತು ಗೋಪಾಲ್ಗೆ ಗಂಭೀರ ಗಾಯವಾಗಿದೆ. ಗಾಯಾಳು ಪೊಲೀಸ್ ಸಿಬ್ಬಂದಿ ಸಿಂಧನೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆಸಿರುವ ಕುರಿತಂತೆ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸ್ರು ಬಲೆ ಬೀಸಿದ್ದಾರೆ.