ಧಾರವಾಡ : ಹಿಂದೂ ಮೂಲಭೂತವಾದಿಗಳು ಉಗ್ರರು ಎಂದು ಸಿಎಂ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ನೀಡಿರುವ ಹೇಳಿಕೆಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯವರ ಮಗ ಯತೀಂದ್ರ ಇನ್ನೂ ಬಚ್ಛಾ. ಹಿಂದೂ, ಹಿಂದುತ್ವದ ಬಗ್ಗೆ ಆತನಿಗೆ ಏನು ಗೊತ್ತಿಲ್ಲ. ಈತ ಹಿಂದೂ ಮೂಲಭೂವಾದಿಗಳ ಬಗ್ಗೆ ಬೇರೆ ಪದ ಬಳಕೆ ಮಾಡಿದ್ದಾರೆ. ಅದನ್ನು ಅವರು ವಾಪಸ್ ಪಡೆಯಬೇಕು. ಹಿಂದೂ ಎಂದಿಗೂ ಉಗ್ರವಾದಿಯಾಗಲು ಸಾಧ್ಯವಿಲ್ಲ. ಮುಂದೆಯೂ ಇದು ಸಾಧ್ಯವಿಲ್ಲ. ಜತೆಗೆ ಉಗ್ರವಾದಿ ಎಂಬ ಶಬ್ದದ ಅರ್ಥ ಇವರಿಗೆ ಗೊತ್ತಿದೆಯಾ? ತಮಗೆ ಬೇಕಾದಂತೆ ಬಾಯಿ ಬಿಡುತ್ತಿದ್ದಾರೆ.
ನಮ್ಮ ಅಪ್ಪ ಸಿಎಂ ಎಂದು ಏನು ಬೇಕಾದ್ದು ಮಾತನಾಡಬಹುದಾ? ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಹಿಂದೂ ಉಗ್ರವಾದಿಯಾದ ಬಗ್ಗೆ ಒಂದೇ ಒಂದು ಉದಾಹರಣೆ ತೋರಿಸಿ. ಈ ರೀತಿ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಜನ ಚಪ್ಪಲಿಯಿಂದ ಹೊಡೆಯುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಯತೀಂದ್ರ ನೀವೂ ಹಿಂದೂ ಆಗಿರುವುದಕ್ಕೆ ಬದುಕುಳಿದಿದ್ದೀರಿ. ಹಿಂದೂ ಉಗ್ರವಾದಿಯಾಗಿದ್ದರೆ ನೀವು ಬದುಕುಳಿಯುತ್ತಿರಲಿಲ್ಲ. ಡಾ.ಯತೀಂದ್ರ ಒಬ್ಬ ಅಯೋಗ್ಯ. ಹಿಂದೂ ಮತ್ತು ಉಗ್ರವಾದದ ಬಗ್ಗೆ ಅರ್ಥ ತಿಳಿದುಕೊಳ್ಳಬೇಕು. ಕೂಡಲೇ ಅವರು ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಶ್ರೀರಾಮ ಸೇನೆಯಿಂದ ಹೋರಾಟ ಮಾಡಬೇಕಾಗುತ್ತದೆ. ಯತೀಂದ್ರ ಎಲ್ಲೆಲ್ಲಿ ಭೇಟಿ ಕೊಡುತ್ತಾರೋ ಅಲ್ಲೆಲ್ಲ ಪ್ರತಿಭಟನೆಯ ಬಿಸಿ ತೋರಿಸಬೇಕಾಗುತ್ತದೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದರು.